ಬೆಂಗಳೂರು: ಕೊರೊನಾ ಒಂದು ವಾರದಿಂದ ಜಾಸ್ತಿ ಆಗ್ತಿದೆ. ನಾಳೆ ಪ್ರಧಾನಿಗಳು ಎಲ್ಲಾ ರಾಜ್ಯಗಳ ಸಿಎಂ ಸಭೆ ಕರೆದಿದ್ದಾರೆ. ಸಭೆಯಲ್ಲಿ ಎಲ್ಲಾ ರಾಜ್ಯಗಳ ಸ್ಥಿತಿಗತಿ ಬಗ್ಗೆ ಅವಲೋಕನೆ ಮಾಡುತ್ತಾರೆ. ಕೊರೊನಾ 4ನೇ ಅಲೆ ತಡೆಗೆ ಮುನ್ನೆಚ್ಚರಿಕಾ ಕ್ರಮ ಹೇಗೆ ಮಾಡಬೇಕು ಅಂತ ನಾಳೆಯ ಸಭೆಯಲ್ಲಿ ಪಿಎಂ ಹೇಳ್ತಾರೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 3ನೇ ಅಲೆಯಲ್ಲಿ ಹೆಚ್ಚು ಸಾವು ನೋವು ಜಾಸ್ತಿ ಆಗಿರಲಿಲ್ಲ. ಅದಕ್ಕೆ ಲಸಿಕೆ ಅಭಿಯಾನ ಕಾರಣ. ರಾಜ್ಯದಲ್ಲಿ 10 ಕೋಟಿ ಲಸಿಕೆ ಕೊಟ್ಟಿದ್ದೇವೆ. ಲಸಿಕೆ ತೆಗೆದುಕೊಂಡರೆ ಕೊರೊನಾ ಬರಲ್ಲ ಅಂತ ಅಲ್ಲ. ಆದರೆ ತೀವ್ರ ತರವಾದ ಸಮಸ್ಯೆ ಇರಲ್ಲ. ನಾಳೆ ಪ್ರಧಾನಿಗಳ ಸಭೆ ಬಳಿಕ ಪ್ರಧಾನಿಗಳು ನಿಡುವ ಸಲಹೆಗಳನ್ನ ರಾಜ್ಯದಲ್ಲಿ ಅನುಷ್ಠಾನ ಮಾಡುತ್ತೇವೆ ಎಂದರು.
ಲಸಿಕೆ ತಗೊಂಡರೆ ಇನ್ಫೆಕ್ಷನ್ ಆಗಬಹುದು. ಅಷ್ಟೆ ದೊಡ್ಡ ಪ್ರಮಾಣದ ಸಮಸ್ಯೆ ಆಗಲ್ಲ. ಎರಡು ಡೋಸ್ ಲಸಿಕೆ ಜನರು ಕಡ್ಡಾಯವಾಗಿ ಪಡೆಯಬೇಕು. 3 ನೇ ಡೋಸ್ 55% ಮಾತ್ರ ಆಗಿದೆ. ಕೂಡಲೇ ಜನರು 3ನೇ ಡೋಸ್ ತೆಗೆದುಕೊಳ್ಳಬೇಕು. 4ನೇ ಅಲೆ ಬರೋವರೆಗೂ ಯಾರೂ ಕಾಯಬೇಡಿ. ಕೂಡಲೇ ಲಸಿಕೆ ಹಾಕಿಸಿಕೊಳ್ಳಿ. ರಾಜ್ಯದಲ್ಲಿ ಲಕ್ಷಾಂತರ ಡೋಸ್ ಲಸಿಕೆ ನಮ್ಮ ಬಳಿ ಇದೆ. ಲಸಿಕೆ ಕೊರತೆ ಇಲ್ಲ. ಜನರು ಲಸಿಕೆ ಕಡ್ಡಾಯವಾಗಿ ಪಡೆಯಬೇಕು. ಮಾಸ್ಕ್ ಕಡ್ಡಾಯವಾಗಿ ಹಾಕಬೇಕು. ಒಳಾಂಗಣದಲ್ಲಿ, ಜನರು ಇರೋ ಕಡೆ, ಗುಂಪು ಇರುವ ಕಡೆ ಮಾಸ್ಕ್ ಕಡ್ಡಾಯವಾಗಿ ಹಾಕಬೇಕು ಎಂದು ಹೇಳಿದರು. ಇದನ್ನೂ ಓದಿ: 2025ರವರೆಗೂ ನಿತೀಶ್ ಕುಮಾರ್ ಸಿಎಂ ಆಗಿರುತ್ತಾರೆ: ಸುಶೀಲ್ ಕುಮಾರ್ ಮೋದಿ
3 ನೇ ಡೋಸ್ ಉಚಿತವಾಗಿ ನೀಡುವ ಕುರಿತು ಪ್ರತಿಕ್ರಿಯಿಸಿ, ಈಗಾಗಲೇ 60 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ಕೊಡಲಾಗುತ್ತಿದೆ. 12 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಉಚಿತ ಇದೆ. ಹೀಗಾಗಿ ಈ ವಯೋಮಾನದವರು ಲಸಿಕೆ ಶೀಘ್ರವೇ ಹಾಕಿಸಿಕೊಳ್ಳಬೇಕು. ಎರಡು ಡೋಸ್ ಲಸಿಕೆ ಹಾಕಿಸಿ 9 ತಿಂಗಳು ಆದವರು 3ನೇ ಡೋಸ್ ಪಡೆಯಬೇಕು. ಉಚಿತ ಲಸಿಕೆ ನಿಡೋ ಬಗ್ಗೆ ನಾಳೆಯ ಸಭೆಯಲ್ಲಿ ಪ್ರಧಾನಿಗಳು ಏನ್ ಸೂಚನೆ ಕೊಡ್ತಾರೆ ನೋಡ್ತೀವಿ. ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಬಗ್ಗೆ ನಿರ್ಧಾರ ಮಾಡುತ್ತೆ. ಆದ್ರೆ ಯುವಕರು ಲಸಿಕೆ ಹಾಕಿಸಿಕೊಳ್ಳಲು ಮುಂದಾಗಬೇಕು ಎಂದರು.
ಐಐಟಿ ಕಾನ್ಪುರದ ತಜ್ಞರು ಜೂನ್ ಅಂತ್ಯದಲ್ಲಿ ಕೊರೊನಾ 4 ನೇ ಅಲೆ ಬರಬಹುದು ಅಂತ ಎಚ್ಚರಿಕೆ ಕೊಟ್ಟಿದ್ದಾರೆ. 3 ಅಲೆಗಳಲ್ಲಿ ಇವ್ರು ಕೊಟ್ಟ ವರದಿ ನಿಜವಾಗಿದೆ. ಹೀಗಾಗಿ ಜೂನ್ ವೇಳೆಗೆ ಅಥವಾ ಒಂದು ತಿಂಗಳ ಮುಂಚೆಯೇ 4ನೇ ಅಲೆ ಬರುವ ಸಾಧ್ಯತೆ ಇದೆ. ಜೂನ್ ನಲ್ಲಿ ಪ್ರಾರಂಭವಾಗಿ ಸೆಪ್ಟೆಂಬರ್- ಅಕ್ಟೋಬರ್ವರೆಗೂ 4ನೇ ಅಲೆ ಇರಬಹುದು ಎಂದು ತಿಳಿಸಿದರು. ಇದನ್ನೂ ಓದಿ: 3.36 ಲಕ್ಷ ಕೋಟಿಗೆ ಟ್ವಿಟ್ಟರ್ ಡೀಲ್ ಮಾಡಿದ ಎಲಾನ್ ಮಸ್ಕ್
ಕೋವಿಡ್ ನಿಂದ ಶಾಲೆಗಳ ಮೇಲೆ ಪರಿಣಾಮ ವಿಚಾರ ಸಂಬಂಧ ಮಾತನಾಡಿ, ಕೋವಿಡ್ ಬಂದು ಎರಡು ವರ್ಷ ಆಗಿದೆ. ಹೀಗಾಗಿ ನಾವು ಕೂಡಾ ಕೋವಿಡ್ ಜೊತೆ ಬದುಕಲು ಕಲಿಯಬೇಕು. ಮಾಸ್ಕ್, ಲಸಿಕಾಕರಣದ ಬಗ್ಗೆ ಜನರು ನಿಗಾವಹಿಸಬೇಕು. ಓಮಿಕ್ರಾನ್ ರೂಪಾಂತರ ಅಂತ ತಳಿ ಇದು ಅಂತ ಹೇಳಲಾಗ್ತಿದೆ. ಈ ಬಗ್ಗೆ ಲ್ಯಾಬ್ ವರದಿ ಕಳಿಸಲಾಗಿದೆ. ಎರಡು ಮೂರು ದಿನಗಳಲ್ಲಿ ವರದಿ ಬರಬಹುದು. ರಾಜ್ಯದಲ್ಲಿ 4 ನೇ ಅಲೆ ಬಂದಿದೆ ಅಂತ ಹೇಳಲು ಸಾಧ್ಯವಿಲ್ಲ. ಕೇಸ್ ನ ಪ್ರಮಾಣ ಇನ್ನು ಕಡಿಮೆ ಇದೆ. ಹೀಗಾಗಿ ಈಗಲೇ 4 ನೇ ಅಲೆ ರಾಜ್ಯಕ್ಕೆ ಬಂದಿದೆ ಅಂತ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.