ಬೆಂಗಳೂರು: ನಾಮಕರಣಕ್ಕೆ (Naming Ceremony) ತವರು ಮನೆಯಿಂದ ಪತ್ನಿ ಮತ್ತು ಆಕೆಯ ಕುಟುಂಬ ತಡವಾಗಿ ಬಂದಿದ್ದಕ್ಕೆ ಕೋಪಗೊಂಡ ಪತಿ ತನ್ನದೇ 11 ತಿಂಗಳ ಮಗುವನ್ನು ನೆಲಕ್ಕೆ ಎಸೆದ ಅಮಾನವೀಯ ಘಟನೆ ಬೆಂಗಳೂರಿನ ಬನಶಂಕರಿ ಸೆಕೆಂಡ್ ಸ್ಟೇಜ್ನಲ್ಲಿ ನಡೆದಿದೆ.
ಜುಲೈ 17ರಂದು ಬನಶಂಕರಿ ಸೆಕೆಂಡ್ ಸ್ಟೇಜ್ನ ಗೋಕುಲ್ ವೆಜ್ ಪಾರ್ಟಿ ಹಾಲ್ನಲ್ಲಿ ಮಗುವಿನ ನಾಮಕರಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಳಗ್ಗೆ 10:30ಕ್ಕೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಹೆಸರುಘಟ್ಟದಲ್ಲಿರುವ ತವರು ಮನೆಯಿಂದ ಪತ್ನಿ ರಮ್ಯಾ ಹಾಗೂ ಆಕೆಯ ಕುಟುಂಬ ಒಂದು ಗಂಟೆ ತಡವಾಗಿ ಬಂದಿದ್ದರಿಂದ ಪತಿ ವಿನಾಯಕ್ ಆಕ್ರೋಶಗೊಂಡಿದ್ದಾನೆ.
ಕಾರ್ಯಕ್ರಮಕ್ಕೆ ಬಂದಿದ್ದ ಅತಿಥಿಗಳ ಎದುರೇ ವಿನಾಯಕ್ ಗಲಾಟೆ ಮಾಡಿದ್ದಾನೆ. ಅತಿಥಿಗಳು ಬರುತ್ತಿದ್ದಾರೆ, ಬಟ್ಟೆ ಹಾಕಿಕೊಂಡು ಬಾ ಎಂದು ಹೇಳಿದ ಮಾವನ ಮೇಲೂ ಹಲ್ಲೆ ನಡೆಸಿದ್ದಾನೆ. ಅಲ್ಲದೆ, ಪತ್ನಿಯ ಜುಟ್ಟು ಹಿಡಿದು ಎಳೆದಾಡಿ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಗಲಾಟೆ ತೀವ್ರವಾಗುತ್ತಿದ್ದಂತೆ ತಡೆಯಲು ಬಂದ ಮಾವನ ಕಂಕುಳಲ್ಲಿದ್ದ 11 ತಿಂಗಳ ಮಗುವನ್ನು ಕಸಿದುಕೊಂಡು ನೆಲಕ್ಕೆ ಬಿಸಾಡಿದ್ದಾನೆ. ಮಗು ನೆಲಕ್ಕೆ ಬಿದ್ದ ರಭಸಕ್ಕೆ ತಲೆಗೆ ಗಂಭೀರ ಗಾಯವಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಚಿಕಿತ್ಸೆ ಪಡೆಯುತ್ತಿದೆ. ಘಟನೆಯ ವೇಳೆ ಗಲಾಟೆ ಬಿಡಿಸಲು ಬಂದ ಹೋಟೆಲ್ ಸಿಬ್ಬಂದಿಯ ಮೇಲೂ ವಿನಾಯಕ್ ಹಲ್ಲೆ ನಡೆಸಿ, ಕಚ್ಚಿ ಗಾಯಗೊಳಿಸಿದ್ದಾನೆ. ಇದನ್ನೂ ಓದಿ: ‘ವಂದೇ ಮಾತರಂ’ಗೆ ಅವಮಾನ ಮಾಡಿದ್ರೆ 3 ವರ್ಷ ಜೈಲು – ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ
ಈ ಸಂಬಂಧ ಪತ್ನಿ ರಮ್ಯಾ ನೀಡಿದ ದೂರಿನ ಆಧಾರದಲ್ಲಿ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ (BNS) ಹಾಗೂ ಜುವೆನೈಲ್ ಜಸ್ಟಿಸ್ (JJ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ವಿನಾಯಕ್ನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಘಟನೆ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.ಇದನ್ನೂ ಓದಿ: PUBLiC TV Impact| ಬಳ್ಳಾರಿ ಎಪಿಎಂಸಿ ಭ್ರಷ್ಟಾಚಾರ – ತನಿಖಾ ವರದಿ ಸಲ್ಲಿಕೆ, 7.50 ಕೋಟಿ ಸರ್ಕಾರಕ್ಕೆ ನಷ್ಟ
