ಬೆಂಗಳೂರು: ನಮ್ಮ ವೋಟ್ ಬ್ಯಾಂಕ್ ಚದುರಿ ಬಿಟ್ಟಿದೆ. ಬಿಜೆಪಿಯವರು ಕೆಲಸ ಮಾಡಿ ವೋಟ್ ಕೇಳುವವರು ಅಲ್ಲ. ಇವರಿಗೆ ಬೇರೆ ಆಯುಧಗಳಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರು ಆಗಿರುವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಪಂಚರಾಜ್ಯಗಳಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸುತ್ತಿದೆ. ಈ ವಿಚಾರವಾಗಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಉತ್ತರಪ್ರದೇಶ, ಪಂಜಾಬ್ನಲ್ಲೂ ನಾವು ಕಾಂಗ್ರೆಸ್ ಗೆಲುವನ್ನು ನಿರೀಕ್ಷೆ ಮಾಡಿರಲಿಲ್ಲ. ಕೆಲವು ಕಾರಣಾಂತರಗಳಿಂದ ನಾವು ಪಂಜಾಬ್ನಲ್ಲಿ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಗೋವಾ, ಮಣಿಪುರ ಹಾಗೂ ಉತ್ತರಾಖಂಡ್ನಲ್ಲಿ ಗೆಲ್ಲುತ್ತೇವೆ ಎಂದು ಕೊಂಡಿದ್ದೇವು. ಆದರೆ ಯಾವುದು ಆಗಿಲ್ಲ. ಕಾರಣವೇನು ಅಂದ್ರೆ ಮೋದಿ ಅವರ ಆಡಳಿತ ಮೆಚ್ಚಿ, ಒಳ್ಳೆಯ ಸರ್ಕಾರ ಕೊಟ್ಟಿದ್ದಾರೆ ಎಂದು ನಾನು ಅಂದುಕೊಳ್ಳುವುದಿಲ್ಲ. ಇದು ಜಸ್ಟ್ ಮೈಂಡ್ ಗೇಮ್ ಆಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಈ ಕ್ರಾಂತಿಗಾಗಿ ಪಂಜಾಬ್ ಜನತೆಗೆ ಧನ್ಯವಾದಗಳು: ಕೇಜ್ರಿವಾಲ್
ಬೇರೆ, ಬೇರೆ ಭಾವನಾತ್ಮಕ ವಿಚಾರಗಳಿಂದ ಅವರು ಈ ಹಿಂದೆ ಹೇಗೆ ಗೆದ್ದರೋ, ಹಾಗೇ ಈ ಬಾರಿಯೂ ಬಿಜೆಪಿ ಅವರು ಗೆದ್ದಿದ್ದಾರೆ. ಕೆಲವು ಕಾಲಗಳವರೆಗೆ ಯಾಮಾರಿಸಬಹುದು. ಎಲ್ಲರನ್ನೂ ಎಲ್ಲಾ ಕಾಲ ಯಾಮಾರಿಸಿಕೊಂಡು ಇರಲು ಸಾಧ್ಯವಿಲ್ಲ. ಒಂದಲ್ಲ ಒಂದು ದಿನ ಇವರ ಬಂಡವಾಳ ಬಯಲಾಗುತ್ತದೆ. ನಮ್ಮ ವೋಟ್ ಬ್ಯಾಂಕ್ ಚದುರಿ ಬಿಟ್ಟಿದೆ. ಹೀಗಾಗಿ ನಮಗೆ ಹಿನ್ನಡೆಯಾಗುತ್ತಿದೆ. ಇವರು ಕೆಲಸ ಮಾಡಿ ವೋಟ್ ಕೇಳುವವರು ಅಲ್ಲ. ಇವರಿಗೆ ಬೇರೆ ಆಯುಧಗಳಿವೆ. ಹೀಗಾಗಿ ಚುನಾವಣೆಯಲ್ಲಿ ಗೆಲ್ಲುತ್ತಾ ಬಂದಿದ್ದಾರೆ ಎಂದು ಹೇಳಿದರು.