ಕೋಲಾರ: ಯುವತಿ ಕರೆ ಮಾಡಿರುವ ವಿಚಾರ ನನಗೆ ತಿಳಿದಿಲ್ಲ. ಅನೇಕ ಬಾರಿ ತಪ್ಪು ಮಾಹಿತಿಗಳು ಬರುತ್ತವೆ. ಆರೋಪಿಗಳು ಎಸ್ಡಿಪಿಐ ಸಂಘಟನೆಯ ಜೊತೆ ಸಂಪರ್ಕದಲ್ಲಿದ್ದ ಅನುಮಾನವಿದೆ. ಆ ವಿಚಾರದಲ್ಲೂ ತನಿಖೆ ನಡೆಯುತ್ತಿದೆ ಎಂದು ಹರ್ಷ ಹತ್ಯೆ ಕೇಸ್ನ ಬಗ್ಗೆ ಕೋಲಾರದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಕೋಲಾರ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ ಶಿವಮೊಗ್ಗ ಹರ್ಷ ಕೇಸ್ನಲ್ಲಿ 24 ಗಂಟೆಯಲ್ಲಿ 8 ಜನ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದೇವೆ. ನಿನ್ನೆ ಹರ್ಷ ಮನೆಗೆ ಭೇಟಿ ನೀಡಿದ ವೇಳೆ ನನ್ನ ಮಗನ ಸಾವು ವ್ಯರ್ಥ ಆಗಬಾರದೆಂದು ಹರ್ಷನ ತಾಯಿ ನನಗೆ ಹೇಳಿದ್ದಾರೆ ಎಂದರು.
ಕೋರ್ಟ್ಗೆ ಸರಿಯಾದ ದಾಖಲಾತಿ ಒದಗಿಸಿ ಸರಿಯಾದ ಶಿಕ್ಷೆ ಕೊಡಿಸುತ್ತೇವೆ. ಬಂಧಿತ ಆರೋಪಿಗಳು ಬಹಳ ವರ್ಷಗಳಿಂದ ತಯಾರಾದವರು. ಒಬ್ಬನ ಮೇಲೆ 11 ಕೇಸ್, ಮತ್ತೊಬನ ಮೇಲೆ 7 ಕೇಸ್ಗಳಿವೆ. ಪೊಲೀಸರು ಇವರನ್ನು ಇಷ್ಟು ವರ್ಷ ಹೇಗೆ ಸಾಕಿದ್ದಾರೆ? ಇದಕ್ಕೆ ಸಂಬಂಧಪಟ್ಟ ಪೊಲೀಸರ ಮೇಲೆಯೂ ಕ್ರಮ ಆಗಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಟ್ರೈಲರ್ ನೋಡಿದ್ದೀರಿ, ಪಿಚ್ಚರ್ ತೋರಿಸುತ್ತೇವೆ – ಭಜರಂಗದಳ ನೇರ ಎಚ್ಚರಿಕೆ
ಎಡಿಜಿಪಿ ಹಂತದ ಇಬ್ಬರು ಅಧಿಕಾರಿಗಳು ಈ ಕೇಸ್ನಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಹರ್ಷನ ಮರ್ಡರ್ ಕೇಸ್ ಇದೆ ಕೊನೆ ಆಗಬೇಕು. ವಿರೋಧ ಪಕ್ಷಗಳಿಗೆ ಟೀಕೆ ಮಾಡುವುದೇ ಒಂದು ಕೆಲಸ. ಡಿಕೆಶಿ ಸರ್ಕಾರ ನಡೆಸುವಾಗ ಹಾಡಹಗಲೇ ರುದ್ರೇಶ್ ಗೌಡನನ್ನು ಕೊಲ್ಲಲಾಗಿತ್ತು. ಅವರ ಸಾಮಥ್ರ್ಯ ಏನು ಎಂದು ನಮಗೂ ಗೊತ್ತಿದೆ ಎಂದು ಡಿಕೆಶಿಗೆ ಟಾಂಗ್ ನೀಡಿದರು.
ಹರ್ಷನ ಶವ ಸಾಗಿಸುವಾಗ ಮಂತ್ರಿಗಳು ಸಹ ಜೊತೆಯಲ್ಲಿ ಇದ್ರು. 144 ಸೆಕ್ಷನ್ ಇದೆ ಎಂದು ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದರೆ ಇನ್ನೂ ಐದಾರು ಹೆಣ ಉರುಳುತ್ತಿತ್ತು. ಪಾದಯಾತ್ರೆ ವೇಳೆ ಕಾಂಗ್ರೆಸ್ನವರು 144 ಸೆಕ್ಷನ್ ಉಲ್ಲಂಘನೆ ಮಾಡಿಲ್ವಾ? ಹರ್ಷ ಪಾರ್ಥೀವ ಶರೀರ ಮೆರವಣಿಗೆ ವೇಳೆ 144 ಸೆಕ್ಷನ್ ಉಲ್ಲಂಘನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಇನ್ನೂ ಇದರಲ್ಲಿ ಯಾವುದೆ ವೋಟ್ ಬ್ಯಾಂಕ್ ರಾಜಕಾರಣ ನಡೆಯಲ್ಲ. ಇದರಲ್ಲಿ ಪ್ರಾಮಾಣಿಕವಾಗಿ ತನಿಖೆ ಮಾಡಲಾಗುತ್ತಿದೆ ಎಂದರು. ಇದನ್ನೂ ಓದಿ: ಹರ್ಷ ಕೊಲೆ ಪ್ರಕರಣ: 8ನೇ ಆರೋಪಿ ಬಂಧನ – ಶಿವಮೊಗ್ಗದಲ್ಲಿ 7 ಡ್ರೋಣ್ಗಳ ಕಾರ್ಯಾಚರಣೆ
ಸೂಲಿಬೆಲೆ ಚಕ್ರವರ್ತಿ ಸೇರಿದಂತೆ ಕೆಲ ನಾಯಕರು ಸಹಜವಾಗಿ ಭಾವುಕರಾಗಿ ಮಾತನಾಡಿದ್ದಾರೆ. ಬೇರೆ ಸರ್ಕಾರಗಳು ಇದ್ದಾಗ ಅಪರಾಧಿಗಳನ್ನ ಪತ್ತೆ ಹಚ್ಚಲು ತಿಂಗಳುಗಟ್ಟಲೆ ತೆಗೆದುಕೊಂಡಿದ್ದರು. ಆದರೆ ನಮ್ಮಲ್ಲಿರುವ ಇಲಾಖೆ ಅಧಿಕಾರಿಗಳು ಸಮರ್ಥ ವಾಗಿ ನಿಭಾಯಿಸುತ್ತಿದ್ದಾರೆ ಎಂದು ಆರಗ ಜ್ಞಾನೇಂದ್ರ ಹೇಳಿದರು.