ನವದೆಹಲಿ: ದೇಶಕ್ಕೆ ಕ್ರಾಂತಿಯ ಬದಲು ವಿಕಾಸದ ಅಗತ್ಯವಿದೆ. ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ದೇಶದ ಇತಿಹಾಸವನ್ನು ಉಳಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವರ್ಚುವಲ್ ಕಾನ್ಫರೆನ್ಸಿಂಗ್ ಮೂಲಕ ಅಖಿಲ ಭಾರತ ಮೇಯರ್ಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ವಿಕಾಸವನ್ನು ನಂಬಬೇಕು. ಭಾರತಕ್ಕೆ ಕ್ರಾಂತಿಯ ಅಗತ್ಯವಿಲ್ಲ, ಆದರೆ ವಿಕಾಸದ ಅಗತ್ಯವಿದೆ. ನಾವು ನಮ್ಮಲ್ಲಿರುವ ಎಲ್ಲವನ್ನು ರಕ್ಷಿಸಬೇಕು ಮತ್ತು ತಾಂತ್ರಿಕ ಉನ್ನತೀಕರಣದತ್ತ ಸಾಗಬೇಕು ಎಂದಿದ್ದಾರೆ. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಸೋಂಕಿತರಿಬ್ಬರು ಎಸ್ಕೇಪ್ ಆಗಲು ಯತ್ನ- ಹಿಡಿದು ಆಸ್ಪತ್ರೆಗೆ ಸೇರಿಸಿದ ಪೊಲೀಸರು!
ಭಾರತದ ಇತಿಹಾಸ ಮತ್ತು ಸಾಂಪ್ರದಾಯವು ಅಭಿವೃದ್ಧಿಯ ಜೊತೆಯಲ್ಲಿ ಸಾಗಬೇಕು. ನಮ್ಮ ದೇಶದ ಬಹುತೇಕ ನಗರಗಳು ಸಾಂಪ್ರದಾಯಿಕ ನಗರಗಳಾಗಿದ್ದು, ಸಂಪ್ರದಾಯಿಕ ರೀತಿಯಲ್ಲಿ ಅಭಿವೃದ್ಧಿ ಹೊಂದಿದ್ದು, ಆಧುನೀಕರಣದ ಈ ಯುಗದಲ್ಲಿ ಈ ನಗರಗಳ ಪ್ರಾಚೀನತೆಯೂ ಅಷ್ಟೇ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ವಾರಣಾಸಿ ಮಾರ್ಗಸೂಚಿಗಳು ನಮಗೆ ಹೇಗೆ ದೇಶವನ್ನು ಅಭಿವೃದ್ಧಿಗೊಳಿಸಬಹುದು ಎಂಬುವುದಕ್ಕೆ ಸಾಕಷ್ಟು ಐಡಿಯಾ ನೀಡುತ್ತದೆ ಎಂದು ಉದಾಹರಣೆ ನೀಡಿದ ಅವರು, ಇಲ್ಲಿನ ನದಿಗಳ ಸ್ವಚ್ಛತೆಯ ಮಹತ್ವವದ ಬಗ್ಗೆ ಕೂಡ ತಿಳಿಸಿದರು.
ಪ್ರಪಂಚದಾದ್ಯಂತ ಪ್ರವಾಸಿಗರು ಗಂಗಾ ಘಾಟ್ಗೆ ಆಗಮಿಸುತ್ತಾರೆ. ಕಾಶಿಯ ಆರ್ಥಿಕತೆಯನ್ನು ನಿಭಾಯಿಸುವಲ್ಲಿ ಗಂಗಾ ಮಾತೆಯ ಮಹತ್ವದ ಕೊಡುಗೆ ಹೊಂದಿದ್ದೇವೆ. ನಾವೆಲ್ಲರೂ ನಮ್ಮ ನಗರಗಳಲ್ಲಿನ ನದಿಯ ಬಗ್ಗೆ ಸೂಕ್ಷ್ಮವಾದ ವಿಧಾನವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: ಭಾರತದ ಸ್ಪರ್ಧಿ ಸೇರಿ 17 ಮಂದಿಗೆ ಕೊರೊನಾ- Miss World 2021 ಫೈನಲ್ ಮುಂದೂಡಿಕೆ
ಪ್ರತಿ ವರ್ಷ ನಮ್ಮ ನಗರಗಳಲ್ಲಿ ಏಳು ದಿನಗಳ ಕಾಲ ನದಿಯ ಹಬ್ಬವನ್ನು ಆಚರಿಸಬೇಕು. ಈ ಹಬ್ಬದಂದು ಇಡೀ ನಗರದ ಜನರೆಲ್ಲಾ ಸೇರಿ ನದಿಯನ್ನು ಸ್ವಚ್ಛಗೊಳಿಸಬೇಕು ಮತ್ತು ಅದರ ವಿಶೇಷತೆಯ ಬಗ್ಗೆ ಗಮನ ಹರಿಸಬೇಕು ಎಂದರು.