ದೇವರು ಎಂದು ನಾವು ತಿಳಿದುಕೊಂಡಿದ್ದೆವು, ನಮ್ಮ ನೋವನ್ನು ಯಾರ ಬಳಿ ಹೇಳೋದು: ಸೆಕ್ಯೂರಿಟಿ ಕಣ್ಣೀರು

Public TV
2 Min Read
Security ramachandrappa

ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರನ್ನು ನಾವು ದೇವರು ಎಂದು ತಿಳಿದುಕೊಂಡಿದ್ದೆವು. ಇನ್ನು ನಮ್ಮ ನೋವನ್ನು ಯಾರ ಬಳಿ ಹೇಳಬೇಕು ಎಂದು ಸೆಕ್ಯೂರಿಟಿ ಗಾರ್ಡ್ ರಾಮಚಂದ್ರಪ್ಪ ಕಣ್ಣೀರು ಹಾಕಿದ್ದಾರೆ.

ಪುನೀತ್ ನಿಧನ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಾಮಚಂದ್ರಪ್ಪ, ಅವರು ಇಲ್ಲ ಎಂಬುದನ್ನು ನಾನು ನಂಬಲು ಆಗುತ್ತಿಲ್ಲ. ಒಬ್ಬ ಒಳ್ಳೆಯ ವ್ಯಕ್ತಿ ಮತ್ತು ಒಳ್ಳೆಯ ಹೆಸರನ್ನು ತೆಗೆದುಕೊಂಡಂತಹ ವ್ಯಕ್ತಿ ಇಷ್ಟು ಬೇಗ ಸಾಯುತ್ತಾರೆ ಎಂದು ಯಾರು ತಿಳಿದುಕೊಂಡಿರಲಿಲ್ಲ. ಅವರನ್ನೆ ದೇವರು ಎಂದು ನಾವು ತಿಳಿದುಕೊಂಡಿದ್ದೆವು. ಅದು ಅಲ್ಲದೇ ಮನೆಯ ಹತ್ತಿರ ಯಾರಾದರೂ ಬಂದರೆ ಅವರನ್ನು ಗದರಬಾರದು ಎಂದು ನಮಗೆ ಹೇಳುತ್ತಿದ್ದರು ಎಂದು ಕಣ್ಣೀರಿಟ್ಟರು. ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೆ ಜೇಮ್ಸ್ ಸಿನಿಮಾ ರಿಲೀಸ್?

Security ramachandrappa 1

ಪುನೀತ್ ಅಣ್ಣ ಎಲ್ಲರನ್ನು ಪ್ರೀತಿಯಿಂದ ಕಾಣುತ್ತಿದ್ದರು. ಎಲ್ಲರಿಗೂ ಅನ್ನ ಕೊಡುತ್ತಿದ್ದರು. ಮನೆಯಲ್ಲಿ ಯಾರೇ ಕೆಲಸ ಮಾಡುತ್ತಿದ್ದರೂ ಅವರನ್ನು ನಗುನಗುತಾ ಮಾತನಾಡಿಸುತ್ತಿದ್ದರು. ಯಾರಿಗೂ ಕೆಟ್ಟದಾಗಿ ಒಂದು ಮಾತನ್ನು ಹೇಳಿದವರಲ್ಲ. ನಾವು ಏನಾದರೂ ಅಂದರೆ ಅವರೇ ಏಕೆ ಆ ರೀತಿ ಮಾತನಾಡುತ್ತಿರಾ? ಆ ರೀತಿ ಮಾತನಾಡಬಾರದು ಎಂದು ಬುದ್ಧಿ ಹೇಳುತ್ತಿದ್ದರು ಎಂದು ಹೇಳಿ ಭಾವುಕರಾದರು.

ಸರಳ ವ್ಯಕ್ತಿ, ಅನ್ನದಾನ ಮಾಡುತ್ತಿದ್ದವರನ್ನು ದೇವರು ಕರೆದುಕೊಳ್ಳುವ ಬಂದಲು ನಮ್ಮಂಥವರನ್ನು ಕರೆದುಕೊಳ್ಳಬೇಕಿತ್ತು. ಇನ್ನೂ ಎತ್ತರಕ್ಕೆ ಬೆಳೆಯ ಬೇಕಾದ ವ್ಯಕ್ತಿಗೆ ಈ ರೀತಿಯ ಸಾವು ನ್ಯಾಯವಲ್ಲ ಎಂದರು.

puneeth rajkuma 2

ಪುನೀತ್ ಸಾವಿಗೂ ಹಿಂದಿನ ದಿನ ಅವರು ರಾತ್ರಿ 12 ಗಂಟೆಗೆ ಗುರುಕಿರಣ್ ಅವರ ಹುಟ್ಟುಹಬ್ಬದ ಪಾರ್ಟಿಯನ್ನು ಮುಗಿಸಿಕೊಂಡು ಮನೆಗೆ ಬಂದಿದ್ದರು. ಆಗ ಅವರು ಸ್ವಲ್ಪ ಎದೆ ನೋವು ಎಂದಿದ್ದರು. ಆದರೆ ಕೋಲ್ಡ್ ಗೆ ಈ ರೀತಿ ಆಗಿದೆ ಎಂದು ಸುಮ್ಮನಾದರು. ಆದರೆ ಬೆಳಗ್ಗೆ ಜಿಮ್ ಮಾಡುವಾಗ ಎದೆ ನೋವು ಇನ್ನೂ ಜಾಸ್ತಿಯಾಗಿದೆ. ಆಗ ಅವರನ್ನು ಅಕ್ಕ ಅಶ್ವಿನಿ ಮತ್ತು ಡ್ರೈವರ್ ಬಾಬಣ್ಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ಪುನೀತ್ ಓದಿಸುತ್ತಿದ್ದ 1,800 ಮಕ್ಕಳ ಜವಾಬ್ದಾರಿ ಹೊತ್ತ ನಟ ವಿಶಾಲ್

ಪುನೀತ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲೇ ಕುಸಿದು ಬಿದ್ದಿದ್ದಾರೆ. ಮತ್ತೆ ಮಾತಿಲ್ಲ, ತಕ್ಷಣ ಅವರನ್ನು ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ಅವರು ಸಾವನ್ನಪ್ಪಿರುವ ಬಗ್ಗೆ ತಿಳಿದುಬಂದಿದೆ. ಆ ದಿನ ಬಾಡಿಗಾರ್ಡ್ ಚಲಪತಿ ಅವರನ್ನು ಕರೆದುಕೊಂಡು ಹೋಗದೇ ಇಲ್ಲೇ ಇರು ಬರುತ್ತೇನೆ ಎಂದು ಹೇಳಿ ಹೋಗಿದ್ದರು ಎಂದು ತಿಳಿಸಿದರು.

ಇನ್ನೂ ನಮ್ಮ ನೋವನ್ನು ಯಾರ ಬಳಿ ಹೇಳಿಕೊಳ್ಳುವುದು. ಯಾರು ನಮ್ಮನ್ನು ನೋಡಿಕೊಳ್ಳುತ್ತಾರೆ. ಇದನ್ನು ಯೋಚನೆ ಮಾಡಿ ರಾತ್ರಿ ಊಟ ಮಾಡಲು ಮನಸ್ಸು ಬರುವುದಿಲ್ಲ ಎಂದು ಕಣ್ಣೀರಿಟ್ಟರು.

Share This Article
Leave a Comment

Leave a Reply

Your email address will not be published. Required fields are marked *