– ಬೊಮ್ಮಾಯಿ ಸರಳ ಜೀವಿ ಅಂದ್ರು ಕಿಚ್ಚ
ಬೆಂಗಳೂರು: ಸುದೀಪ್ ಒಬ್ಬ ನಟರಾಗುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಆದರೆ ಇಂದು ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಅವರೊಬ್ಬ ಕ್ಲಾಸ್ ಮತ್ತು ಪ್ರತಿಭಾವಂತ ನಟ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.
ಗಣೇಶ ಹಬ್ಬದ ವಿಶೇಷ ದಿನದಂದು ಪಬ್ಲಿಕ್ ಟಿವಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ವಿಶೇಷ ಸಂದರ್ಶನ ನಡೆಸಿತ್ತು. ಈ ವೇಳೆ ಸ್ಯಾಂಡಲ್ವುಡ್ ನಟ ಅಭಿನಯ ಚಕ್ರವರ್ತಿ ಸುದೀಪ್ ಕೂಡ ಕರೆ ಮಾಡಿ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿಕೊಂಡರು. ಇದನ್ನೂ ಓದಿ: ನಿನ್ನ ವಾಹನದಿಂದ ಬೆಳೆ ಉಳಿಸು- ಗಣಪತಿಗೆ ಜೀವಂತ ಇಲಿ ನೀಡಿ ಬೇಡಿಕೊಂಡ ರೈತ
ಮೊದಲ ಬಾರಿಗೆ ಬಸವರಾಜ ಬೊಮ್ಮಾಯಿರನ್ನು ಭೇಟಿ ಮಾಡಲು ಕಚೇರಿಗೆ ಹೋದ ವೇಳೆ ನಾನು ಮುಖ್ಯಮಂತ್ರಿಯನ್ನು ಭೇಟಿ ಮಾಡುತ್ತಿದ್ದೇನೆ ಅಂತ ಮತ್ತು ಈಗಲೂ ನಾನು ಮುಖ್ಯಮಂತ್ರಿಯವರೊಟ್ಟಿಗೆ ಮಾತನಾಡುತ್ತೇನೆ ಎಂದು ಅನಿಸುತ್ತಿಲ್ಲ. ನಾನು ನನ್ನ ಬಾಲ್ಯದಿಂದಲೂ ಅವರನ್ನು ನೋಡುತ್ತಿದ್ದೇನೆ. ಅಂದಿನಿಂದ ಇಂದಿನವರೆಗೂ ಅವರು ನನ್ನ ವೃತ್ತಿ ಜೀವನಕ್ಕೆ ಹೆಚ್ಚು ಬೆಂಬಲ ನೀಡುತ್ತಾ ಬಂದಿದ್ದಾರೆ. ಬಸವರಾಜ ಬೊಮ್ಮಾಯಿ ಒಬ್ಬರು ಸರಳಜೀವಿ ಎಂದು ಸುದೀಪ್ ಹೇಳಿದ್ದಾರೆ.
ಇದೇ ವೇಳೆ ಬೊಮ್ಮಾಯಿ ಅವರು, ಸುದೀಪ್ ಒಬ್ಬರು ಆ್ಯಕ್ಟರ್ ಆಗುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಸುದೀಪ್ ಶಾಲೆಯಲ್ಲಿದ್ದಾಗ ಕ್ರಿಕೆಟ್ ಮೇಲೆ ಬಹಳ ಆಸಕ್ತಿ ಹೊಂದಿದ್ದರು. ಹಾಗಾಗಿ ನಾನು ಕ್ರಿಕೆಟರ್ ಆಗುತ್ತಾರೆ ಎಂದು ಭಾವಿಸಿದ್ದೆ. ಆದರೆ ವಿದ್ಯಾಭ್ಯಾಸ ಮುಗಿದ ಬಳಿಕ ಸುದೀಪ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಸುದೀಪ್ ತಂದೆಗೆ ಚಿತ್ರರಂಗಕ್ಕೆ ಬರಬೇಕು ಎಂಬ ಆಸೆ ಇತ್ತು. ಅವರ ಆಸೆಯನ್ನು ಸುದೀಪ್ ಈಡೇರಿಸಿದ್ದಾರೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಕಲಬುರಗಿ ಮೇಯರ್ ಚುನಾವಣೆ- ಮುಂದಿನ ವಾರ ಅಧಿಸೂಚನೆ
ಸದ್ಯ ಎಲ್ಲಾ ಭಾಷೆಗಳಲ್ಲಿ ಅಭಿನಯಿಸಿ ಸುದೀಪ್ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಸುದೀಪ್ ದೊಡ್ಡ ಸ್ಟಾರ್ ಆದ ನಂತರ ನನ್ನಿಂದ ಕೊಂಚ ದೂರ ಆದರು. ದೂರ ಎಂದರೆ ಸುದೀಪ್ ಸ್ಟಾರ್ ಆದಾಗ ಆಕಾಶದಲ್ಲಿದ್ದರು. ನಾವು ಭೂಮಿ ಮೇಲೆ ಇದ್ದೆವು ಎಂದು ಹಾಸ್ಯ ಮಾಡಿದ್ದಾರೆ. ಸುದೀಪ್ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ. ಅವರೊಬ್ಬರು ಕ್ಲಾಸ್ ಹಾಗೂ ಪ್ರತಿಭಾವಂತ ನಟ. ಪ್ರತಿಯೊಂದು ಸಿನಿಮಾದಲ್ಲಿ ಬೆಳೆಯುತ್ತಲೇ ಬಂದಿದ್ದಾರೆ ಎಂದು ಹೊಗಳಿದ್ದಾರೆ.
ಈ ವೇಳೆ ಸುದೀಪ್, ದೂರ ಆಗುವ ಪ್ರಶ್ನೆಯೇ ನಮ್ಮಲ್ಲಿ ಇಲ್ಲ. ಅವರೊಬ್ಬರು ಸಿಹಿಯಾದ ವ್ಯಕ್ತಿ. ಇತ್ತೀಚೆಗೆ ಅವರ ಮನೆಗೆ ಭೇಟಿ ನೀಡಿದಾಗ ಬ್ಯುಸಿಯಾಗಿದ್ದರೂ, ಎಲ್ಲರನ್ನೂ ಹೊರಗೆ ಕಳುಹಿಸಿ ನನ್ನೊಂದಿಗೆ 20 ನಿಮಿಷ ಸಮಯ ಕಳೆದಿದ್ದಾರೆ. ಅಂದು ನಾನು ಆಫೀಸ್ನಲ್ಲಿ ನನ್ನ ಹಳೆಯ ಬೊಮ್ಮಾಯಿ ಮಾಮನನ್ನು ನೋಡಿದೆ. ನೀವು ಬ್ಯುಸಿಯಾಗಿರುತ್ತೀರಾ ನಾನು ಬರುತ್ತೇನೆ ಎಂದು ಹೊರಡಲು ಮುಂದಾದಾಗ ಕೂಡ ನಾನು ಇಂದು ಮುಖ್ಯಮಂತ್ರಿಯಾಗುತ್ತೇನೆ, ನೀನು ದೊಡ್ಡ ಸ್ಟಾರ್ ಆಗುತ್ತಿಯಾ ಎಂದು ಯಾವತ್ತೂ ಭಾವಿಸಿರಲಿಲ್ಲ. ಇದೆಲ್ಲಾ ಜೀವನದಲ್ಲಿ ಬರುತ್ತಿರುತ್ತದೆ ಮತ್ತು ಹೋಗುತ್ತಿರುತ್ತದೆ ಎಂದಿದ್ದರು. ಈ ಮಾತನ್ನು ನಾನು ಯಾವತ್ತಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಂಗಳೂರಿನ ಶರವು ಮಹಾಗಣಪತಿ ದೇವಸ್ಥಾನದಲ್ಲಿ ಸಂಭ್ರಮದ ಗಣೇಶೋತ್ಸವ