ಮೈಸೂರು: ಶ್ರಮಿಕ ವರ್ಗದವರಿಗೆ ತಲಾ 5 ಸಾವಿರ ರೂ. ಕೊಟ್ಟು ಇನ್ನೂ 15 ದಿನ ಲಾಕ್ಡೌನ್ ಮಾಡಿ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಂ ಅವರೇ ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ. ಪ್ರತಿ ಜಿಲ್ಲೆಗೂ ಹಿರಿಯರು ಐಎಎಸ್ ಅಧಿಕಾರಿಯನ್ನು ಮಾನಿಟರ್ ಮಾಡಲು ನಿಯೋಜಿಸಿ. ಪ್ರತಿ ಜಿಲ್ಲೆಗೂ 100 ಕೋಟಿ ರೂಪಾಯಿ ನೀಡಿ. ಅವರೇ ಆಕ್ಸಿಜನ್ ವ್ಯವಸ್ಥೆ, ಬೆಡ್ ವ್ಯವಸ್ಥೆ ಎಲ್ಲವನ್ನೂ ಅವರಿಗೆ ಮಾಡಲು ನಿರ್ದೇಶಿಸಿ. ಜಿಲ್ಲೆಯನ್ನು ಕೊರೊನಾ ಮುಕ್ತ ಮಾಡಿ, ಯಾವ ಸಾವು ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನೀಡಿ. ಹಣಕಾಸು ವ್ಯವಹಾರವನ್ನು ಕೇಂದ್ರೀಕೃತ ಮಾಡಿಕೊಂಡು ಕೆಲಸ ಮಾಡಿ ಅಂದರೆ ಜಿಲ್ಲಾಧಿಕಾರಿಗಳು ಏನೂ ಮಾಡುತ್ತಾರೆ. ಜಿಲ್ಲಾಧಿಕಾರಿಗಳಿಗೆ ಹಣ ನೀಡಿ ಬಳಕೆಯ ಸ್ವತಂತ್ರ ನೀಡಿ ಎಂದರು.
ಮೈಸೂರಿನಲ್ಲಿ ಒಂದು ದಿನವೂ ಡಿಸಿ ಹಳ್ಳಿಗಳ ಕಡೆ ಹೋಗಿಲ್ಲ. ಟಾಸ್ಕ್ ಪೋರ್ಸ್ ನವರೂ ಹಳ್ಳಿಗಳಿಗೆ ಹೋಗುತ್ತಿಲ್ಲ. ಯಾವ ಜಿಲ್ಲಾಧಿಕಾರಿ ಹಳ್ಳಿಗಳ ಕಡೆ ಹೋಗಿದ್ದಾರೆ ಹೇಳಿ? ಹಳ್ಳಿಯ ಸಾಯುತ್ತಿರುವವರು ಶ್ರಮಿಕರು, ಅಹಿಂದ ವರ್ಗದವರೇ ಶ್ರಮಿಕರು ಹೆಚ್ಚು. ಸಿದ್ದರಾಮಯ್ಯ ಇದರ ಬಗ್ಗೆ ಮಾತನಾಡಿ. ಮಾಂಸದ ಅಂಗಡಿಗಳನ್ನು ಮುಚ್ಚಿ. ಮಾಂಸದ ಅಂಗಡಿ ಮುಂದೆ ದಿನವೂ ಜನಜಾತ್ರೆ ಇರುತ್ತದೆ ಎಂದು ಆಗ್ರಹಿಸಿದ್ದಾರೆ.
ಒಂದು ತಿಂಗಳು ಮಾಂಸ ತಿನ್ನದೇ ಇದ್ದರೆ ಸತ್ತು ಹೋಗುತ್ತಾರಾ? ಜನರು ಮೊದಲಿನ ರೀತಿಯ ಜೀವನ ಶೈಲಿ ಬದುಕಲು ಆಗಲ್ಲ. ದಿನವೂ ದಿನಸಿ, ತರಕಾರಿ ತರಬೇಕಾ? ವಾರಕ್ಕೆ ಒಂದು ದಿನ ತೆಗೆಯಿರಿ? ಸಂತೆಯಲ್ಲಿ ವಾರಕ್ಕೆ ಒಂದು ದಿನ ದಿನಸಿ, ತರಕಾರಿ ತಂದುಕೊಳ್ಳುತ್ತಾರೆ. ಎಲ್ಲರೂ ಹೀಗೆ ಮಾಡಲಿ ಎಂದರು.
ಪ್ರತಿ ಹಣದ ಬಿಲ್ ಕೂಡ ವಿಜಯೇಂದ್ರನ ಕಡೆಯಿಂದ ಕ್ಲಿಯರ್ ಆಗಬೇಕು. ಹಣದ ಬಿಡುಗಡೆಯ ಕೇಂದ್ರೀಕರಣ ಮೊದಲು ತಪ್ಪಬೇಕು. ಡಿಸಿಗಳಿಗೆ ಹಣ ಖರ್ಚು ಮಾಡುವ ಅಧಿಕಾರ ನೀಡಬೇಕು. ಸರಕಾರ ನಡೆಸುವವರು ಹೆಣದ ಮೇಲೆ ಹಣ ಮಾಡಲು ಹೋಗಬೇಡಿ ಎಂದು ವಿಶ್ವನಾಥ್ ಹೇಳಿದ್ದಾರೆ.