ಚೆನ್ನೈ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಇಯಾನ್ ಮೋರ್ಗನ್ ನಾಯಕತ್ವದ ಬಗ್ಗೆ ಮಾಜಿ ನಾಯಕ ಗೌತಮ್ ಗಂಭೀರ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾನುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ 38 ರನ್ಗಳ ಸೋಲು ಅನುಭವಿಸಿದ ಬಳಿಕ ವಾಹಿನಿಯ ಜೊತೆ ಗಂಭೀರ್ ಮಾತನಾಡುತ್ತಿದ್ದರು.
ಈ ವೇಳೆ ಮಾತನಾಡಿದ ಅವರು, ವರುಣ್ ಚಕ್ರವರ್ತಿ ಅವರು ತಮ್ಮ ಮೊದಲ ಓವರಿನಲ್ಲೇ ವಿರಾಟ್ ಕೊಹ್ಲಿ ಮತ್ತು ರಜತ್ ಪಾಟಿದರ್ ಅವರನ್ನು ಔಟ್ ಮಾಡಿದ್ದರು. ಮೂರನೇ ಓವರಿನಲ್ಲಿ ಅವರಿಗೆ ಬೌಲ್ ನೀಡದೇ ಬಾಂಗ್ಲಾದೇಶ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಅವರಿಗೆ ನೀಡಿದ್ದು ಯಾಕೆ ಎನ್ನುವುದನ್ನು ನಾನು ಅರ್ಥಮಾಡಿಕೊಳ್ಳಲು ವಿಫಲನಾಗಿದ್ದೇನೆ. ನನ್ನ ಜೀವನದಲ್ಲಿ ನಾನು ಕಂಡ ವಿಲಕ್ಷಣವಾದ ನಾಯಕತ್ವ ಇದೇ ಇರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಬ್ಬ ಭಾರತೀಯ ನಾಯಕ ಈ ಪ್ರಮಾದವನ್ನು ಮಾಡದಿದ್ದಕ್ಕೆ ನನಗೆ ಸಂತೋಷವಾಗಿದೆ. ಇದೊಂದು ದೊಡ್ಡ ಬ್ಲಂಡರ್. ಒಂದು ವೇಳೆ ಭಾರತೀಯ ನಾಯಕ ಏನಾದರೆ ಈ ಪ್ರಮಾದ ಮಾಡಿದ್ದರೆ ಜನ ಭಾರೀ ಟೀಕೆ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.
ತಮ್ಮ ಮೊದಲ ಓವರ್ನಲ್ಲೇ ವರುಣ್ ಚಕ್ರವರ್ತಿ 2 ವಿಕೆಟ್ ಪಡೆದಿದ್ದರು. ನಂತರ ಅವರಿಗೆ ಇನ್ನಿಂಗ್ಸ್ ನ 8ನೇ ಓವರ್ ನೀಡಲಾಗಿತ್ತು. ವರುಣ್ ಚಕ್ರವರ್ತಿ 4 ಓವರ್ ಎಸೆದು 39 ರನ್ ನೀಡಿ 2 ವಿಕೆಟ್ ಪಡೆದಿದ್ದರು.
ಎಬಿಡಿ ವಿಲಿಯರ್ಸ್ ಮತ್ತು ಗ್ಲೇನ್ ಮ್ಯಾಕ್ಸ್ವೆಲ್ ಅವರ ಸ್ಫೋಟಕ ಅರ್ಧಶತಕದಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 38 ರನ್ಗಳಿಂದ ಜಯಗಳಿಸಿತ್ತು. ಗೆಲ್ಲಲು 205 ರನ್ಗಳ ಕಠಿಣ ಸವಾಲನ್ನು ಪಡೆದ ಕೋಲ್ಕತ್ತಾ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿತು.
ಈ ಮೂಲಕ ಸತತ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಬೆಂಗಳೂರು ಮುಂದುವರಿದಿದೆ. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆರ್ಸಿಬಿ ಮೊದಲ 3 ಪಂದ್ಯಗಳನ್ನು ಗೆದ್ದುಕೊಂಡಿದೆ.