– ನಮ್ಮ ರಾಜ್ಯ ಕಾಂಗ್ರೆಸ್ ರಾಜ್ಯಗಳಂತೆ ಆಗಬಾರದು
ಬೆಂಗಳೂರು: ಮಹಾರಾಷ್ಟ್ರ ಹಾಗೂ ದೆಹಲಿಯ ಪರಿಸ್ಥಿತಿ ನಮ್ಮಲ್ಲಿ ಇಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಲಾಕ್ ಡೌನ್ ಮಾಡೋದಿಕ್ಕೆ ಒತ್ತಡಗಳು ಬರುತ್ತಿಲ್ಲ. ಲಾಕ್ ಡೌನ್ ಒಂದೇ ಪರಿಹಾರ ಅಲ್ಲ. ಕೋವಿಡ್ ತಡೆಗೆ ಜನರ ಸಹಕಾರ ಅಗತ್ಯ. ನಗರದಲ್ಲಿ ಕಠಿಣ ಕ್ರಮ ತಗೋತೀವಿ. ಪರಿಸ್ಥಿತಿ ಕೈಮೀರಿ ಹೋಗಿಲ್ಲ. ಮಹಾರಾಷ್ಟ್ರ, ದೆಹಲಿಯಂತ ಪರಿಸ್ಥಿತಿ ನಮ್ಮಲ್ಲಿ ಇಲ್ಲ. ಇನ್ನೂ ನಮ್ಮಲ್ಲಿ ಕೋವಿಡ್ ತಡೆಗೆ ಕ್ರಮ ಕೈಗೊಳ್ಳಲು ಅವಕಾಶ ಇದೆ ಎಂದು ಹೇಳಿದರು.
ರಾಜ್ಯದಲ್ಲಿ ಏಳು ಮೆಡಿಕಲ್ ಆಕ್ಸಿಜನ್ ತಯಾರಿಕಾ ಕಂಪೆನಿಗಳಿವೆ. ಇವುಗಳಿಂದ 711 ಮೆಟ್ರಿಕ್ ಟನ್ ಲಿಕ್ವಿಡ್ ಆಕ್ಸಿಜನ್ ತಯಾರಿಸಬಹುದು. ಸದ್ಯ ನಮಗೆ 270 ಮೆಟ್ರಿಕ್ ಟನ್ ಲಿಕ್ವಿಡ್ ಆಕ್ಸಿಜನ್ ಅಗತ್ಯ ಇದೆ. ಆಕ್ಸಿಜನ್ ಸಮಸ್ಯೆ ಇಲ್ಲ. ಆಕ್ಸಿಜನ್ ಶೇಖರಣೆ ಸಾಮರ್ಥ್ಯ ಇರೋ ಆಸ್ಪತ್ರೆಗಳಿಗೆ ಅಗತ್ಯ ಇದ್ದಷ್ಟು ಪೂರೈಸ್ತಿದ್ದೀವಿ. ಸಂಗ್ರಹ ಸಾಮಥ್ರ್ಯ ಇಲ್ಲದ ಆಸ್ಪತ್ರೆಗಳಿಗೆ ನಿತ್ಯ ಎರಡು ಮೂರು ಬಾರಿ ಆಕ್ಸಿಜನ್ ಪೂರೈಸ್ತಿದ್ದೀವಿ ಎಂದರು.
ರೆಮೆಡಿಸಿವಿರ್ ಇಂಜೆಕ್ಷನ್ ಕೊರತೆ ಇಲ್ಲ. ಏಪ್ರಿಲ್ 11 ರಿಂದ 17 ರವರೆಗೆ 47,726 ಪೂರೈಸಲಾಗಿದೆ. ಸದ್ಯ 20 ಸಾವಿರ ರೆಮೆಡಿಸಿವಿರ್ ದಾಸ್ತಾನು ಇದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲೂ ಕೊರತೆ ಇಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಸಮಸ್ಯೆ ಇದೆ, ಸರಿ ಮಾಡ್ತೀವಿ ಎಂದು ಭರವಸೆ ನೀಡಿದ್ದಾರೆ.
ಇನ್ನೂ ಎರಡು ತಿಂಗಳು ಇದೇ ಕೋವಿಡ್ ಪರಿಸ್ಥಿತಿ ಇರುತ್ತೆ. ಮುಂದಿನ ಎರಡು ತಿಂಗಳಿಗೆ ಕೈಗೊಳ್ಳುವ ಕ್ರಮಗಳ ಬಗ್ಗೆ ಇವತ್ತು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ನಮ್ಮ ರಾಜ್ಯ ಕಾಂಗ್ರೆಸ್ ರಾಜ್ಯಗಳಂತೆ ಆಗಬಾರದು. ನಮ್ಮ ರಾಜ್ಯದಲ್ಲಿ ಕೈಗೊಳ್ಳೋ ಕ್ರಮಗಳು ಬೇರೆ ರಾಜ್ಯಗಳಿಗೆ ಮಾದರಿಯಾಗಬೇಕು. ಅಂಥ ನಿರ್ಧಾರ ಸಭೆಯಲ್ಲಿ ತಗೋತೇವೆ ಎಂದಿದ್ದಾರೆ.