– ಒಂದು ಬಾರಿ ಎಡವಿದನ್ನ ಅಸೆಂಬ್ಲಿಯಲ್ಲಿ ಹೇಳಿದ್ದೇನೆ
ಬೆಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಏಕಪತ್ನಿವ್ರತಸ್ಥ ಸವಾಲಿನಲ್ಲಿ ನನ್ನ ಹೆಸರನ್ನು ಯಾಕೆ ಸುಧಾಕರ್ ತೆಗೆದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಸಿಡಿಮಿಡಿಗೊಂಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್ಡಿಕೆ, ರಾಜ್ಯದಲ್ಲಿ ಹಲವು ಸಮಸ್ಯೆಗಳು ಇದೆ ಆದರೆ ಅದನ್ನೆಲ್ಲ ಹೊರತು ಪಡಿಸಿ ಸದನದಲ್ಲಿ ಕಳೆದ ಮೂರು ದಿನಗಳಿಂದ ಸಿಡಿ ವಿಚಾರ ಚರ್ಚೆಯಾಗುತ್ತಿದೆ. ಇದೀಗ ಏಕಪತ್ನಿವ್ರತಸ್ಥ ಸವಾಲಿಗೆ ನನ್ನ ಹೆಸರು ಸುಧಾಕರ್ ಯಾಕೆ ತಂದ್ರು, `ಇಲ್ಲಿ ಯಾರೂ ಸತ್ಯಹರಿಶ್ಚಂದ್ರರೂ ಅಲ್ಲ’ ನನ್ನ ಹೆಸರು ಏಕೆ ತೆಗೆದಿದ್ದಾರೆ ಅಂತ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.
ಭೂಮಿ ಮೇಲೆ ಪ್ರತಿಯೊಂದು ಜೀವಿಗಳಿಗು ಸಹಜ ಪ್ರಕ್ರಿಯೆಗಳು ಇದ್ದೆ ಇರುತ್ತವೆ, ಇದನ್ನು ಹಿಡಿದುಕೊಂಡು ಕೆಸರೆರೆಚಾಟ ಮಾಡುವುದು ಸರಿಯಲ್ಲ. ಬಿಜೆಪಿ ಸರ್ಕಾರ ಬಂದ ನಂತರ ಇತ್ತೀಚೆಗೆ ಕೆಲವು ಘಟನೆಗಳನ್ನು ಮತ್ತೆ ಮತ್ತೆ ವೈಭವೀಕರಿಸಿ ಹೇಳುವ ಮೂಲಕ ಅವರ ಮುಖಕ್ಕೆ ಅವರೆ ಮಸಿ ಬಳಿದುಕೊಳ್ಳುತ್ತಿದ್ದಾರೆ. ನಾನು ಕೆಲ ದಿನಗಳ ಹಿಂದೆ ನಮ್ಮ ಕುಟುಂಬ ಇಂತಹ ವಿಷಯಗಳನ್ನಿಟ್ಟುಕೊಂಡು ಈ ರೀತಿ ರಾಜಕೀಯ ಮಾಡಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಹಾಗೆ ನಾನು ಒಂದು ಬಾರಿ ಎಡವಿದ್ದೆ ಎಂದು ಅಸಂಬ್ಲಿಯಲ್ಲಿ ಹೇಳಿಕೊಂಡಿದ್ದೆ. ನಾನು ಮಂತ್ರಿಗಳಿಗೆ ಮನವಿ ಮಾಡಿಕೊಳ್ಳುತ್ತೇನೆ ನೀವು ವೈಯಕ್ತಿಕವಾಗಿ ಮಾಡಿಕೊಂಡಿರುವ ತಪ್ಪಿಗೆ, ಬೇರೆ ಅವರನ್ನು ಬಲಿಪಶು ಮಾಡಬೇಡಿ ಎಂದು ಮನವಿ ಮಾಡಿಕೊಂಡರು.
ಸರ್ಕಾರ ಪ್ರತಿ ಕುಟುಂಬದ ಸಮಸ್ಯೆಯನ್ನು ಸರಿಯಾಗಿ ಕೇಳುವ ಬದಲು ಯಾವುದೋ ಬೇಡವಾದ ವಿಷಯವನ್ನು ಹಿಡಿದುಕೊಂಡು ಚರ್ಚೆನಡೆಸುವುದು ಸರಿಯಲ್ಲ. ಸರ್ಕಾರ ಮಂಡಿಸಿರುವ ಬಜೆಟ್ ಕುರಿತು ಸರಿಯಾಗಿ ಚರ್ಚೆ ನಡೆಸಿ ಇದನ್ನು ಹೊರತು ಪಡಿಸಿ ಇತರ ವಿಷಗಳನ್ನು ಇಟ್ಟುಕೊಂಡು ಸದನದ ಗೌರವವನ್ನು ಹರಾಜು ಹಾಕುವುದು ಸರಿಯಲ್ಲ ಎಂದು ಅಭಿಪ್ರಯಾಪಟ್ಟರು.