– ನಾನು ನೂರಕ್ಕೆ ನೂರು ಏಕಪತ್ನಿ ವ್ರತಸ್ಥ
– ಸುಧಾಕರ್ ಹೇಳಿಕೆಯಿಂದ ಅವರಿಗೆ ಸಂಬಂಧ ಇದೆ ಅಂತಾಯ್ತು
ಬೆಂಗಳೂರು: ನಾನು ನೂರಕ್ಕೆ ನೂರು ಏಕಪತ್ನಿ ವ್ರತಸ್ಥ ಎಂದು ಶಾಸಕ ಶಿವಲಿಗೇಗೌಡ ಹೇಳಿದ್ದಾರೆ.
ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿ 224 ಶಾಸಕರ ಏಕಪತ್ನಿವ್ರತಸ್ಥರಾ ಎಂಬ ಸಚಿವ ಸುಧಾಕರ್ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಅವರು ತಪ್ಪು ಹೇಳಿದ್ದಾರೆ. ನಾನು ನೂರಕ್ಕೆ ನೂರು ಏಕ ಪತ್ನಿ ವ್ರತಸ್ಥ ಎಂದು ತಿಳಿಸಿದ್ದಾರೆ.
ನನಗೆ ಒಬ್ಬಳೇ ಹೆಂಡತಿಯಿದ್ದು, ಬೇರೆ ಯಾವುದೆ ಸಂಬಂಧ ಇಲ್ಲ. ಸುಧಾಕರ್ ಹೇಳಿಕಿಯಿಂದ ಅವರದ್ದು ಇನ್ನೂ ಸಂಬಂಧ ಇದೆ ಅಂತಾಯ್ತು. ಅವರನ್ನು ಸೇರಿಸಿ ಹೇಳಿಕೊಂಡಿದ್ದಾರೆ ಎಂದು ಶಿವಲಿಂಗೇಗೌಡರು ಹೇಳಿದ್ದಾರೆ.
ಈ ದೇಶದಲ್ಲಿ ಸತ್ಯ ಇದ್ದರೆ ಅದು ದೇವಸ್ಥಾನದಲ್ಲಿ ಮಾತ್ರ. ನಾನು ಎಲ್ಲಿ ಬೇಕಾದರು ಬಂದು ಸತ್ಯ ಮಾಡ್ತೀನಿ ನಾನು ಏಕ ಪತ್ನಿ ವ್ರತಸ್ಥನೇ. ಆದರೆ ಸುಧಾಕರ್ ಹಾಗೆ ಹೇಳಿದ್ದು ತಪ್ಪು ಎಂದು ಶಾಸಕರು ಗರಂ ಆದರು.
ಸುಧಾಕರ್ ಹೇಳಿದ್ದೇನು..?
ಇಂದು ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು ವಿಪಕ್ಷ ನಾಯಕರಿಗೆ ಸವಾಲು ಎಸೆದರು. ಕಾನೂನಿನ ಪ್ರಕಾರ ನ್ಯಾಯಾಲಯದಿಂದ ರಕ್ಷಣೆ ಪಡೆದಿದ್ದೇವೆ. ಆರೋಪಗಳನ್ನ ಮಾಡುವ ನಾಯಕರು ಸಂವಿಧಾನಕ್ಕೆ ಗೌರವ ನೀಡಬೇಕು. ರಾಷ್ಟ್ರೀಯ ನಾಯಕರು ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮರ್ಯಾದೆ ಪುರುಷರು, ಶ್ರೀರಾಮಚಂದ್ರ ಅನ್ಕೊಂಡು ಮಾತಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನೀವು ನಿಮ್ಮ ಜೀವನದಲ್ಲಿ ಅನೈತಿಕ ಸಂಬಂಧ ಇಟ್ಟುಕೊಂಡಿಲ್ವಾ? ಮಾನ್ಯ ಸಿದ್ದರಾಮಯ್ಯ, ಕುಮಾರಸ್ವಾಮಿ, ಮುನಿಯಪ್ಪ, ಡಿ.ಕೆ.ಶಿವಕುಮಾರ್ ಮತ್ತು ನನ್ನನ್ನು ಸೇರಿದಂತೆ ಎಲ್ಲ 224 ಶಾಸಕರ ವೈಯಕ್ತಿಕ ಜೀವನದ ಬಗ್ಗೆ ತನಿಖೆ ಆಗಲಿ. ಯಾರಿಗೆ ಅನೈತಿಕ ಸಂಬಂಧ ಇದೆ, ವಿವಾಹವೇತರ ಸಂಬಂಧ ಇದೆ ಎಂಬುವುದು ಗೊತ್ತಾಗಲಿ. ಸಿಎಂ ಆಗಿದ್ದಾಗ ಯಾರು ಏನು ಮಾಡಿದ್ರು ಅನ್ನೋದು ಗೊತ್ತಾಗಲಿ. ಸಿದ್ದರಾಮಯ್ಯ, ಕುಮಾರಸ್ವಾಮಿ, ಮುನಿಯಪ್ಪ, ಡಿ.ಕೆ.ಶಿವಕುಮಾರ್ ಏನು ಏಕಪತ್ನಿವ್ರತಸ್ಥರಾ? ನೈತಿಕತೆ ಬಗ್ಗೆ ಮಾತನಾಡೋರು ಮಾದರಿ ಆಗಿದ್ದರೆ ತನಿಖೆಗೆ ಎಲ್ಲರೂ ಒಪ್ಪಿಕೊಳ್ಳಲಿ ಎಂದು ಸವಾಲು ಹಾಕಿದರು.