ಮಂಡ್ಯ: ಶಿವಮೊಗ್ಗದಲ್ಲಿ ನಡೆದ ಸ್ಫೋಟ ಪ್ರಕರಣದ ಬಳಿಕ ಅಧಿಕಾರಿಗಳ ವಿರುದ್ಧ ಸಚಿವ ನಾರಾಯಣಗೌಡ ಗರಂ ಆಗಿದ್ದಾರೆ.
ಬೇಬಿಬೆಟ್ಟದ ಅಕ್ರಮ ಗಣಿಗಾರಿಕೆಯಿಂದ ಕೆಆರ್ಎಸ್ ಡ್ಯಾಂಗೆ ತೊಂದರೆ ಎಂಬ ಮಾತುಗಳು ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ನಾರಾಯಣಗೌಡ ವಾರ್ನಿಂಗ್ ನೀಡಿದ್ದಾರೆ.
ಗಣಿ ಸಚಿವರ ಜೊತೆ ಅಕ್ರಮ ಗಣಿ ಪ್ರದೇಶಗಳಿಗೆ ಭೇಟಿ ಕೊಟ್ಟು ವಾರ್ನ್ ಮಾಡಿ ಬಂದಿದ್ದೇವೆ. ಆದರೂ ಅಕ್ರಮ ಗಣಿ ನಿಂತಿಲ್ಲ, ನೆನ್ನೆ ರಾತ್ರಿಯೂ ಅಕ್ರಮ ಗಣಿಗಾರಿಕೆ ನಡೆದಿದೆ. ಮಂಡ್ಯ ಜಿಲ್ಲೆಯಲ್ಲಿ ನೂರಾರು ಲೈಸೆನ್ಸ್ ಇಲ್ಲದ ಕ್ರಷರ್ಗಳಿವೆ. ಅಧಿಕಾರಿಗಳು ಮಾಡಿದ ತಪ್ಪಿಗೆ ನಾವು ಶಿಕ್ಷೆ ಅನುಭವಿಸುವಂತಾಗಿದೆ ಎಂದು ಕಿಡಿಕಾರಿದ್ದಾರೆ.
ಗಣಿ ಸಚಿವರ ಗಮನಕ್ಕೆ ತಂದು ಅಧಿಕಾರಿಗಳ ವಿರುದ್ಧ ಕ್ರಮ ತೆಗೆಕೊಳ್ಳಬೇಕಾಗುತ್ತದೆ. ಈ ಕೂಡಲೇ ಅಕ್ರಮ ಗಣಿಗಾರಿಕೆ ನಿಲ್ಲಬೇಕು. ಲೈಸೆನ್ಸ್ ಪಡೆದು, ಸರ್ಕಾರಕ್ಕೆ ರಾಜಧನ ಕಟ್ಟಿ ಕ್ರಷರ್ ನಡೆಸಲಿ. ಯಾರ್ಯಾರು ಅಕ್ರಮವಾಗಿ ಗಣಿಗಾರಿಕೆ ಮಾಡ್ತಿದ್ದಾರೋ ಅವರು ಈ ಕೂಡಲೇ ನಿಲ್ಲಿಸಬೇಕು. ಕಲ್ಲು, ಜಲ್ಲಿ ಅಗತ್ಯ ಇದೆ. ಆದರೆ ಲೈಸೆನ್ಸ್ ಪಡೆದು ಗಣಿಗಾರಿಕೆ ನಡೆಸಲಿ ಎಂದು ಅಕ್ರಮ ಗಣಿಗಳ್ಳರ ವಿರುದ್ಧ ಸಚಿವರು ಸಮರ ಸಾರಿದ್ದಾರೆ.