ಬೆಂಗಳೂರು: ಕೊರೊನಾ ಎರಡನೇ ಅಲೆ ಭೀತಿ ಹಿನ್ನೆಲೆ ಈ ವರ್ಷದ ನ್ಯೂಇಯರ್ ಆಚರಣೆಗೆ ಸರ್ಕಾರ ಬ್ರೇಕ್ ಹಾಕಿದೆ. ಎಂಜಿ ರೋಡ್, ಬ್ರಿಗೇಡ್ ರೋಡ್ ಸೇರಿದಂತೆ ರಾಜ್ಯದ ಎಲ್ಲಾ ಕಡೆ ಸೆಲೆಬ್ರೇಷನ್ ಬ್ಯಾನ್ ಮಾಡಿದ್ದು, ಶೀಘ್ರವೇ ಅಧಿಕೃತ ಆದೇಶ ಹೊರಡಿಸಲಿದೆ ಸರ್ಕಾರ.
ಕೊರೊನಾ ಎರಡನೇ ಅಲೆ ಆತಂಕದಿಂದ ಈ ಬಾರಿ ಹೊಸ ವರ್ಷದ ಆಚರಣೆಗೆ ಸರ್ಕಾರ ಬ್ರೇಕ್ ಹಾಕಿದೆ. ತಜ್ಞರ ಸಲಹೆಯಂತೆ ಸಂಭ್ರಮಾಚರಣೆಗೆ ರಾಜ್ಯಾದ್ಯಂತ ಬ್ರೇಕ್ ಹಾಕಲು ನಿರ್ಧಾರ ಮಾಡಿದ್ದು, ಸಿಎಂ ಯಡಿಯೂರಪ್ಪ ಅಂತಿಮ ಮುದ್ರೆ ಬಿದ್ದ ತಕ್ಷಣ ಸಂಭ್ರಮಾಚರಣೆ ನಿಷೇಧ ಆದೇಶ ಜಾರಿಗೆ ಬರಲಿದೆ. ವಿಧಾನಸೌಧದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಈ ವರ್ಷ ಎಂಜಿ ರೋಡ್, ಬ್ರಿಗೇಡ್ ರೋಡ್ ಸೇರಿದಂತೆ ಅಲ್ಲೂ ಸಂಭ್ರಮಾಚರಣೆ ಮಾಡುವ ಹಾಗೆ ಇಲ್ಲ. ಸರ್ಕಾರ ಈ ಬಾರಿ ಸಂಭ್ರಮಾಚರಣೆ ಬ್ಯಾನ್ ಮಾಡಿದೆ. ಮನೆಯಲ್ಲಿ ಈ ಬಾರಿ ಸಂಭ್ರಮಾಚರಣೆ ಮಾಡಿಕೊಳ್ಳಿ ಅಂತ ಸಲಹೆ ನೀಡಿದರು.
ಕಠಿಣ ನಿಯಮ: ಡಿಸೆಂಬರ್ 31ರ ರಾತ್ರಿ ರಾಜ್ಯಾದ್ಯಂತ ಎಲ್ಲೂ ಸಂಭ್ರಮಾಚರಣೆ ಮಾಡುವಂತಿಲ್ಲ. ಡಿಸೆಂಬರ್ 20 ರಿಂದ ಜನವರಿ 2 ರವರೆಗೆ ಕಠಿಣ ನಿಯಮ ಜಾರಿಗೆ ಬರುವ ಸಾಧ್ಯತೆಗಳಿವೆ. ರಾಜಕೀಯ, ಧಾರ್ಮಿಕ ಸಭೆ-ಸಮಾರಂಭಗಳಲ್ಲಿ 200 ಜನರಿಗೆ ಮಾತ್ರ ಅವಕಾಶ ನೀಡಬಹುದು. ಹೊಟೇಲ್, ಪಬ್, ಬಾರ್, ನೈಟ್ ಕ್ಲಬ್ಗಳಲ್ಲಿ ಈಗಿರುವಂತೆ 50% ಮಾತ್ರ ಅವಕಾಶ. ಹೊಸ ವರ್ಷದ ಆಚರಣೆಗೆ ಮನರಂಜನಾ ಕಾರ್ಯಕ್ರಮಗಳು ಬ್ಯಾನ್ ಆಗಲಿವೆ.
ಪಬ್, ಹೊಟೇಲ್ ಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡುವಂತಿಲ್ಲ. ಪಬ್, ಬಾರ್, ಹೊಟೇಲ್, ನೈಟ್ ಕ್ಲಬ್ ತೆರೆಯಲು ಪೊಲೀಸರ ಅನುಮತಿ ಕಡ್ಡಾಯವಾಗಿದೆ. ಪಬ್, ಬಾರ್, ನೈಟ್ ಕ್ಲಬ್, ಹೊಟೇಲ್ಗಳಲ್ಲಿ ನಿಯಮ ಮೀರಿದ್ರೆ ಮಾಲೀಕರ ವಿರುದ್ದ ಕ್ರಮ. ರಾಜಕಾರಣಿಗಳು, ಉದ್ಯಮಿಗಳು, ಜನಸಾಮಾನ್ಯರು ಎಲ್ಲರಿಗೂ ಈ ನಿಯಮ ಅನ್ವಯವಾಗಲಿದೆ. ಮದ್ಯ ಪಾರ್ಸಲ್ಗೆ ಯಾವುದೇ ನಿರ್ಬಂಧ ಇಲ್ಲ. ರಸ್ತೆ ರಸ್ತೆಗಳಲ್ಲಿ ಕುಡಿದು ಕುಪ್ಪಳಿಸೋದು ನಿರ್ಬಂಧ.
ಇಂದು ನಡೆದ ಕೊರೊನಾ ಟಾಸ್ಕ್ಫೋರ್ಸ್ ಸಭೆಯಲ್ಲೂ ಹೆಮ್ಮಾರಿ ಎರಡನೇ ಅಲೆ ಬಗ್ಗೆ ಚರ್ಚೆ ಮಾಡಲಾಯ್ತು. ಸಭೆ ಸಮಾರಂಭಗಳಿಗೆ ನಿರ್ಬಂಧ ವಿಧಿಸೋದು, ನ್ಯೂ ಇಯರ್ಗೆ ಕಠಿಣ ಕ್ರಮ ಜಾರಿಗೆ ತಜ್ಞರ ಕೊಟ್ಟಿದ್ದ ವರದಿ ಅನುಷ್ಠಾನ ಮಾಡೋದಾಗಿ ಸಚಿವ ಸುಧಾಕರ್ ತಿಳಿಸಿದರು. ಜನವರಿ ನಮಗೆ ಹೊಸ ವರ್ಷ ಅಲ್ಲ. 2020 ಶೋಕ ವರ್ಷ. ಹೀಗಾಗಿ ಯಾರು ಹೊಸ ವರ್ಷವನ್ನ ದೊಡ್ಡದಾಗಿ ಆಚರಿಸದೇ ಮನೆಯಲ್ಲಿ ಆಚರಿಸಿ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರು.