ಮೈಸೂರು: ಏಕವಚನದ ಮಾತು ಕಡಿಮೆ ಮಾಡಿ ಎಂದು ಹೇಳಿಕೆ ನೀಡಿದ್ದ ಎಂಎಲ್ಸಿ ಹೆಚ್ ವಿಶ್ವನಾಥ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಇಂದು ಮೈಸೂರಿನಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ವಿಶ್ವನಾಥ್ ಎಷ್ಟು ಏಕವಚನದಲ್ಲಿ ಮಾತನಾಡಿದ್ದಾನೆ ಎಂದು ನಾನು ತೋರಿಸ್ಲಾ? ಕೆ.ಆರ್.ನಗರ ಶಾಸಕನ ಬಗ್ಗೆ ಎಷ್ಟು ಮಾತನಾಡಿದ್ದಾನೆ ತೋರಿಸಬೇಕಾ ಎಂದು ಮತ್ತೆ ಏಕವಚನದಲ್ಲಿ ವಿಶ್ವನಾಥ್ಗೆ ತಿರುಗೇಟು ನೀಡಿದರು.
ನನ್ನದು ಹಳ್ಳಿ ಭಾಷೆ, ಹಾಗಾಗಿ ಅದು ಏಕವಚನ ಅನ್ನಿಸುತ್ತದೆ. ನಾನು ಉದ್ದೇಶವಾಗಿ ಏಕವಚನ ಬಳಸೋಲ್ಲ ಅದು ತಾನಾಗಿಯೇ ಬರೋದು. ನಾವು ದೇವರನ್ನೇ ಏಕವಚನದಲ್ಲಿ ಕರೆಯುತ್ತೇವೆ. ಮಹದೇಶ್ವರರು ಅಂತ ಕರೆಯುತ್ತಾರಾ? ಯಾವ ದೇವರನ್ನಾದರೂ ಬಹುವಚನದಲ್ಲಿ ಕರೆದಿರೋದು ನೋಡಿದ್ದೀರಾ? ವಿಶ್ವನಾಥ್ರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ವಾಗ್ದಾಳಿ ಮಾಡಿದರು.
ಇದೇ ವೇಳೆ ನನ್ನ ನಾಯಕತ್ವ ಹೋದರೂ ಪರವಾಗಿಲ್ಲ ಸಿದ್ದರಾಮಯ್ಯ ಬೆಳೆಯಬೇಕೆಂದು ಕಾಂಗ್ರೆಸ್ಗೆ ಸೇರಿಸಿಕೊಂಡೆವು ಎಂಬ ವಿಶ್ವನಾಥ್ ಹೇಳಿಕೆ ವಿಚಾರವಾಗಿ ಮಾತನಾಡಿ, ನನಗೆ ಯಾರು ನಾಯಕತ್ವವನ್ನು ಬಿಟ್ಟು ಕೊಟ್ಟಿಲ್ಲ. ನಾನು ಕಾಂಗ್ರೆಸ್ ಸೇರಲು ರಾಜ್ಯದ ಯಾವ ಕಾಂಗ್ರೆಸ್ ನಾಯಕರು ಕಾರಣರಲ್ಲ. ಬೆಂಗಳೂರಿನ ನನ್ನ ಸ್ನೇಹಿತ ಪೀರನ್, ಅಹ್ಮದ್ ಪಟೇಲ್ ಜೊತೆ ಮಾತುಕತೆ ನಡೆಸಿ ನಂತರ ಸೋನಿಯಾ ಗಾಂಧಿ ಕಾಂಗ್ರೆಸ್ ಸೇರಿಸಿಕೊಂಡರು. ನಾನು ಸ್ಪಷ್ಟವಾಗಿ ಹೇಳುತ್ತೇನೆ ನಾನು ಕಾಂಗ್ರೆಸ್ ಸೇರಲು ರಾಜ್ಯದ ಯಾವ ನಾಯಕರು ಕಾರಣರಲ್ಲ ಎಂದರು.