ಲಕ್ನೋ: ಸಮಾಧಿಯಲ್ಲಿ ಹೂತಿರುವ 4 ವರ್ಷದ ಮಗುವಿನ ಮೃತದೇಹ ಕಾಣೆಯಾಗಿದೆ ಎಂದು ಉತ್ತರ ಪ್ರದೇಶದ ಬುಲಂದ್ಶಹರ್ ನ ಖಾನ್ಪುರ್ ಪೊಲೀಸ್ ಠಾಣೆ ಪ್ರದೇಶದಿಂದ ಆಘಾತಕಾರಿ ಪ್ರಕರಣ ಹೊರಬಿದ್ದಿದೆ
ಉತ್ತರ ಪ್ರದೇಶದ ಥೋನಾ ಗ್ರಾಮದಲ್ಲಿ 4 ವರ್ಷದ ಮಗುವೊಂದು ಜ್ವರದಿಂದ ಬುಧವಾರ ಮೃತಪಟ್ಟಿದೆ. ಮಗುವಿನ ಮರಣದ ನಂತರ ಕುಟುಂಬಸ್ಥರು ಮಗುವಿನ ಅಂತ್ಯಕ್ರಿಯೆ ಮಾಡಿ ಮನೆಗೆ ಬಂದಿದ್ದರು. ಮೃತ ದೇಹವನ್ನು ಆ ರಾತ್ರಿ ಸಮಾಧಿಯಿಂದ ಹೊರತೆಗೆದಿದ್ದಾರೆ ಎಂಬ ವಿಷಯ ಊರ ತುಂಬ ಹಬ್ಬಿತ್ತು.
ಮಗು ದೇಹ ಸಮಾಧಿಯಿಂದ ಕಾಣೆಯಾಗಿದೆ ಎಂಬ ಸುದ್ದಿಯಿಂದ ಅನುಮಾನಗೊಂಡ ಕುಟುಂಬಸ್ಥರು ಸಮಾಧಿಯನ್ನು ಅಗೆದು ನೋಡಿದ್ದಾರೆ. ಆದರೆ ಮಗುವಿನ ಮೃತದೇಹ ಸಮಾಧಿ ಮಾಡಿದ ಸ್ಥಳದಲ್ಲಿ ಇರಲಿಲ್ಲ. ಮಗುವಿನ ಶವ ಕಾಣೆಯಾಗಿರುವುದು ಕುಟುಂಬಸ್ಥರಿಗೆ ಪಕ್ಕಾ ಆಗಿದೆ. ಈ ವಿಚಾರವಾಗಿ ಮೃತ ಮಗುವಿನ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ.
ಮಾಟ-ಮಂತ್ರಕ್ಕಾಗಿ ಮಗುವಿನ ದೇಹವನ್ನು ತೆಗೆಯಲಾಗಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಮಗುವಿನ ದೇಹವನ್ನು ಸಮಾಧಿಯಿಂದ ತೆಗೆದಿರುವುದು ಅಸಹ್ಯಕರ ಕೃತ್ಯ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಘಟನೆಯ ಸುದ್ದಿ ತಿಳಿದ ಕೂಡಲೇ ಸುತ್ತಮುತ್ತಲಿನ ಪ್ರದೇಶದ ಜನರು ಕುಟುಂಬ ಸದಸ್ಯರೊಂದಿಗೆ ಸಮಾಧಿ ಇರುವ ಸ್ಥಳದಲ್ಲಿ ಜಮಾಯಿಸಿದ್ದಾರೆ. ಮಗುವಿನ ಶವ ಸಮಾಧಿಯಿಂದ ಕಣ್ಮರೆಯಾಗಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದು ತನಿಖೆ ನಡೆಸಿದ್ದಾರೆ.