ಬೆಂಗಳೂರು: ಮತದಾರರ ಬಳಿ ಮತ ಭಿಕ್ಷೆ ಕೇಳಿದ್ದೀನಿ. ಆ ಭಿಕ್ಷೆ ಕೊಡುತ್ತಾರೆ ಎಂದು ನಂಬಿದ್ದೀನಿ ಎಂದು ಆರ್.ಆರ್.ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮುನಿರತ್ನ ಅವರು, ಕೊರೊನಾದಂತಹ ಸಂದರ್ಭದಲ್ಲಿ ಮತದಾನ ಮಾಡುವುದು ವಿಶೇಷವಾಗಿದೆ. 18 ವರ್ಷದ ಯುವಕ ತನ್ನ ಮೊದಲ ಮತದಾನದಲ್ಲಿ ಭಾಗಿಯಾಗುತ್ತಿದ್ದರೆ, ಇವತ್ತಿನ ಮತದಾನ ಇತಿಹಾಸದಲ್ಲಿ ಉಳಿಯುತ್ತದೆ. ಏಕೆಂದರೆ ಕೊರೊನಾ ಕಾರಣದಿಂದ ಚುನಾವಣಾ ಆಯೋಗ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಕೊರೊನಾಗೆ ಹೆದರಿಕೊಳ್ಳುವ ಅಗತ್ಯವಿಲ್ಲ, ಶಾಂತಿಯುತ ಮತದಾನ ನಡೆಯುತ್ತಿದೆ. ಕೈಗೆ ಗ್ಲೌಸ್, ಫೇಸ್ ಮಾಸ್ಕ್ ಹಾಕಿಕೊಂಡು ಸ್ಯಾನಿಟೈಸರ್ ಬಳಕೆ ಮಾಡಿ ಕೊರೊನಾ ಸಂದರ್ಭದಲ್ಲಿ ಮತದಾನ ಮಾಡಿದ ಅನುಭವ ಜೀವನದಲ್ಲಿ ನೆನಪಿನಲ್ಲಿ ಉಳಿಯುತ್ತೆ ಎಂದರು.
ಕ್ಷೇತ್ರದ ಮತದಾರರು ಬುದ್ಧಿವಂತರಾಗಿದ್ದು, ಎಲ್ಲರೂ ಖಂಡಿತ ಬಂದು ಮತ ಚಲಾಯಿಸುತ್ತಾರೆ. ಯಾರಿಗಾದರೂ ಮತ ಹಾಕಿ ಆದರೆ ಎಲ್ಲರೂ ಮತದಾನ ಮಾಡಿ. ನಾನು ಮಲ್ಲೇಶ್ವರಂ ನಿವಾಸಿಯಾಗಿದ್ದು, ನನಗೆ ಆರ್.ಆರ್ ನಗರದಲ್ಲಿ ಮತದಾನದ ಅವಕಾಶವಿಲ್ಲ. ಆದ್ದರಿಂದ ಮನೆಯಲ್ಲಿ ಇರುತ್ತೇನೆ. ನಾನು ಎಲ್ಲದಕ್ಕೂ ಸಿದ್ಧವಾಗಿದ್ದು, ಜನರ ತೀರ್ಪು ಅಂತಿಮವಾಗಿದೆ. ಚುನಾವಣೆ ಸಂದರ್ಭದಲ್ಲಿ ಮಾಡಿದ ಆರೋಪಿಗಳಿಗೆ ನಾನು ಫಲಿತಾಂಶದ ದಿನ ಉತ್ತರ ಕೊಡುತ್ತೇನೆ. ಆರೋಪ ಮಾಡಿದವರು ತಿರುಪತಿಗೆ ಅಲ್ಲ, ಈ ಭೂಲೋಕದ ಯಾವುದೇ ದೇವಸ್ಥಾನಕ್ಕೆ ಕರೆದರೂ ನಾನು ಬರಲು ಸಿದ್ಧನಾಗಿದ್ದೇನೆ. ಅವರು ಸಿದ್ಧರಾಗಿ ಇರಲಿ. ಚುನಾವಣೆ ಸಂದರ್ಭದಲ್ಲಿ ಆರೋಪ ಮಾಡುವುದು ದೊಡ್ಡ ವಿಚಾರವಿಲ್ಲ ಎಂದರು.
ರಾಜಕಾರಣಿಗೂ ಭಿಕ್ಷೆ ಬೇಡುವವನಿಗೂ ಯಾವುದೇ ವ್ಯತ್ಯಾಸವಿಲ್ಲ. ಭಿಕ್ಷೆ ಬೇಡುವವರು ಅಮ್ಮ ಊಟ ಎನ್ನುತ್ತಾನೆ, ನಾವು ಅಮ್ಮ ಮತ ನೀಡಿ ಎನ್ನುತ್ತೇವೆ. ನನ್ನ ಮೇಲಿನ ಆರೋಪಗಳಿಗೆ ನಾನು ಉತ್ತರ ಕೊಡಲು ಸಿದ್ಧವಾಗಿದ್ದು, ಚುನಾವಣಾ ಆಯೋಗ ಅನುಮತಿ ಪಡೆದು ಪ್ರತಿಕಾಗೋಷ್ಠಿ ನಡೆಸುತ್ತೇನೆ. ಅಲ್ಲದೇ ನಾನು ಜಂಟಿ ಸುದ್ದಿಗೋಷ್ಠಿ ನಡೆಸಲು ಕೂಡ ಸಿದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.