ಬೆಂಗಳೂರು: ಉಪಚುನಾವಣೆ ಕದನದ ಬಹಿರಂಗ ಪ್ರಚಾರಕ್ಕೆ ಇವತ್ತು ಸಂಜೆ 6ಕ್ಕೆ ತೆರೆ ಬಿದ್ದಿದೆ. ಕೊನೆಯ ದಿನವಾದ ಇಂದು ಆರ್.ಆರ್.ನಗರ ಮತ್ತು ಶಿರಾದಲ್ಲಿ ಕೊನೆ ಕ್ಷಣದವರೆಗೂ ರಾಜಕೀಯ ಪಕ್ಷಗಳು ಮತ ಬೇಟೆ ನಡೆಸಿದವು. ಕೊನೆಯ ದಿನವಾದ ಇಂದು ರಾಜಕೀಯ ವಾಕ್ಸಮರಕ್ಕೂ ಸಾಕ್ಷಿಯಾಯ್ತು.
ಆರ್.ಆರ್ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಹಣ ಹಂಚಿಕೆ ಮಾಡುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಕೆಂಡಾಮಂಡಲವಾದ್ರು. ಲಗ್ಗೆರೆಯಲ್ಲಿ ಹಣ ಹಂಚುತ್ತಿದ್ದ 7 ಹೊರಗಿನ ವ್ಯಕ್ತಿಗಳ ಬಂಧನವಾಗಿದ್ದು, ಎಫ್ಐಆರ್ ದಾಖಲಾಗಿದೆ. ಕನಕಪುರದಿಂದ ಬಂದವರು ಹಣ ಹಂಚುತ್ತಿದ್ದು, ಒಂದು ಮತಕ್ಕೆ 2 ರಿಂದ 5 ಸಾವಿರ ಆಮಿಷ ಒಡ್ಡುತ್ತಿದ್ದಾರೆ ಅಂತ ಮುನಿರತ್ನ ಆರೋಪಿಸಿದ್ರು. ಇದೇ ವೇಳೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಇದೇ ಮೊದಲ ಬಾರಿಗೆ ಈ ಚುನಾವಣೆಯಲ್ಲಿ ತಮಗೆ ಯಾರು ಪ್ರತಿಸ್ಪರ್ಧಿ ಅನ್ನೋ ವಿಷಯ ಬಹಿರಂಗಗೊಳಿಸಿದರು ತಮ್ಮ ಪ್ರತಿಸ್ಪರ್ಧಿ ಜೆಡಿಎಸ್ ಹೊರತು ಕಾಂಗ್ರೆಸ್ ಅಲ್ಲ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ನವರು ಕೂಡ ಇವತ್ತು ಕೊನೇ ಕಸರತ್ತು ಮಾಡಿದ್ರು. ಜೆಪಿ ಪಾರ್ಕ್ ಬಳಿಕ 2 ಚರ್ಚ್ ಗಳಿಗೆ ಡಿಕೆಶಿ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿ, ನಾವು ಚರ್ಚ್, ಮಸೀದಿಗೆ ಪ್ರಾರ್ಥನೆಗೆ ಹೋಗುತ್ತೇವಿ, ಮತ ಕೇಳಲಿಕ್ಕಲ್ಲ. ಮಸೀದಿ, ಚರ್ಚ್ ಹಾಗೂ ದೇವಸ್ಥಾನಗಳಿಗೆ ಹೋಗಿ ಕ್ಷೇತ್ರದಲ್ಲಿ ಶಾಂತಿ ಉಳಿಯಲಿ ಎಂದು ಪ್ರಾರ್ಥಿಸ್ತೇವೆ. ಕುಸುಮಾ ಗೆಲ್ಲಲಿ ಅಂತ ಪ್ರಾರ್ಥಿಸ್ತೇವೆ ಅಂದ್ರು. ಬಳಿಕ ಯಶವಂತಪುರ, ಬಿಕೆ ನಗರದಲ್ಲಿ ರೋಡ್ ಶೋ ನಡೆಸಿದ್ರು. ಇದರ ಮಧ್ಯೆ ಜೆಡಿಎಸ್ ಅಭ್ಯರ್ಥಿ ಕೃಷ್ಣ ಮೂರ್ತಿ ಕೂಡ ಯಶವಂತಪುರ ವಾರ್ಡ್ನಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಮಾಡಿದರು.
ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ಇಂದು ಭರ್ಜರಿ ಕ್ಯಾಂಪೇನ್ ಮಾಡಿತು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಕುಮಾರಸ್ವಾಮಿ, ನಿಖಿಲ್ ಸೇರಿ ಅಮ್ಮಾಜಮ್ಮ ಪರ ಮತಯಾಚನೆ ಮಾಡಿದರು. ಬಹಿರಂಗ ಪ್ರಚಾರಕ್ಕೆ ಕೊನೆ ದಿನವಾದ ಇಂದು ಶಿರಾದ ಐಬಿ ಸರ್ಕಲ್ನಿಂದ ರಾಮಚಂದ್ರಪ್ಪ ಬಯಲು ರಂಗಮಂದಿರವರೆಗೆ ಮೆರವಣಿಗೆ ನಡೆಸಿದ್ರು. ಈ ವೇಳೆ ಜೆಡಿಎಸ್ ಅಭ್ಯರ್ಥಿ ಅಮಾಜಮ್ಮ ಸೆರಗೊಡ್ಡಿ ಮತಯಾಚನೆ ಮಾಡಿದರು. ಮತಯಾಚನೆ ಮಾಡಿದ ಕೆಲವೇ ಕ್ಷಣಗಳಲ್ಲಿ ಸುಸ್ತಿನಿಂದ ಕುಸಿದು ಬಿದ್ದರು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯ್ತು, ಬಳಿಕ ಚೇತರಿಸಿಕೊಂಡರು.
ಇನ್ನೊಂದ್ಕಡೆ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ನೇತೃತ್ವದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಮನೆ ಮನೆಗೆ ತೆರಳಿ ಪ್ರಚಾರ ಮಾಡಿತು. ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಶಿರಾ, ಆರ್ಆರ್ ನಗರ ಎರಡೂ ಕಡೆ ಗೆಲ್ಲುತ್ತೇವೆ. ಅಭಿವೃದ್ಧಿ ಹೆಸರಲ್ಲಿ ನಾವು ಮತ ಕೇಳಿದ್ದೇವೆ ಎಂದು ಹೇಳಿದರು. ಕಾಂಗ್ರೆಸ್ನ ಟಿ.ಬಿ.ಜಯಚಂದ್ರ ಮಾಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೋರಸಂದ್ರ, ಗುಳಿಗೇನಹಳ್ಳಿ, ನ್ಯಾಗೆರೆ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು.
ಕಳೆದ 21 ದಿನಗಳ ಬಹಿರಂಗ ಮತಬೇಟೆಗೆ ತೆರೆ ಬಿದ್ದಿದೆ. ಮತದಾರರಲ್ಲದವರು, ರಾಜಕೀಯ ನಾಯಕರುನ ಕ್ಷೇತ್ರ ತೊರೆದಿದ್ದಾರೆ. ಕ್ಷೇತ್ರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಾಳೆ ಅಭ್ಯರ್ಥಿಗಳು ಮನೆಮನೆ ಪ್ರಚಾರ ನಡೆಸಲಿದ್ದು, ಅಂತಿಮ ಕಸರತ್ತು ನಡೆಸಲಿದ್ದಾರೆ.