ತುಮಕೂರು: ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂಬ ವಿರೋಧ ಪಕ್ಷದ ನಾಯಕರ ಹೇಳಿಕೆ ಆಧಾರ ರಹಿತ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.
ತುಮಕೂರಿನ ಅಗಳಕೋಟೆಯಲ್ಲಿ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಕೊರೊನಾ ಟೆಸ್ಟಿಂಗ್ ಲ್ಯಾಬ್ ಉದ್ಘಾಟಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಂಕಿತರ ಸಂಖ್ಯೆ 5 ಲಕ್ಷ ತಲುಪಿದ್ದು ಮಾತ್ರ ವಿರೋಧ ಪಕ್ಷದವರಿಗೆ ಕಾಣುತ್ತದೆ. ಆದರೆ ಅಷ್ಟೇ ಪ್ರಮಾಣದಲ್ಲಿ ಅಂದರೆ ನಾಲ್ಕು ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ ಅನ್ನೋದು ಅವರಿಗೆ ತಿಳಿದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸದ್ಯ ಒಂದು ಲಕ್ಷ ಆಕ್ಟೀವ್ ಕೇಸ್ ಇದೆ ಅಷ್ಟೆ. ಹಾಗೆ ನೋಡಿದ್ರೆ 20 ಪರ್ಸೆಂಟ್ ಕೂಡ ಇಲ್ಲ. ಕೊರೊನಾ ನಿರ್ವಹಣೆಯಲ್ಲಿ ದೇಶದ ಒಟ್ಟು ಸಾವಿನ ಪ್ರಮಾಣ 1.64 ಇದೆ. ರಾಜ್ಯದಲ್ಲಿ 1.56 ರಷ್ಟಿದೆ. ಅಂದರೆ ತುಂಬಾ ಕಡಿಮೆ ಇದೆ. ಹೀಗಿರುವಾಗ ವಿರೋಧ ಪಕ್ಷದ ನಾಯಕರ ಹೇಳಿಕೆ ಆಧಾರ ರಹಿತ ಎಂದು ಗರಂ ಆದರು.
ಇದೇ ವೇಳೆ ರಾಜ್ಯದ ಕೋವಿಡ್ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸಮಸ್ಯೆ ಕುರಿತು ಮಾತನಾಡಿದ ಸಚಿವರು, ಯಾವ್ಯಾವ ಜಿಲ್ಲೆಯಲ್ಲಿ ಸಮಸ್ಯೆ ಇತ್ತೋ ಆಯಾ ಜಿಲ್ಲೆಗಳಿಗೆ ಪೂರೈಕೆ ಮಾಡಿದ್ದೇವೆ. ಗುಜರಾತ್ ಮತ್ತು ಹೈದರಾಬಾದ್ ಮೂಲದ ಖಾಸಗಿ ಸಂಸ್ಥೆಗಳಿಂದ ಖರೀದಿ ಮಾಡೋಕೆ ಒಪ್ಪಂದ ಮಾಡ್ಕೊಂಡಿದ್ದೀವಿ. ಹಾಗಾಗಿ ಮುಂದಿನ ದಿನದಲ್ಲಿ ಯಾವುದೇ ಸಮಸ್ಯೆ ಆಗೋದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.