ಬಳ್ಳಾರಿ: ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಆಂಜನೇಯ ಸ್ವಾಮಿ ಅನುಗ್ರಹ ಮಾಡಿದಾಗ ಮಂತ್ರಿಯಾಗುತ್ತೇನೆ ಎಂದು ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಹುಟ್ಟುಹಬ್ಬದ ಹಿನ್ನೆಲೆ ನಗರದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ, ಆಂಜನೇಯ ಸ್ವಾಮಿ ಅನುಗ್ರಹ ನೀಡಿದಾಗ ಆಗುತ್ತೇನೆ. ನಾನು ಮಂತ್ರಿ ಸ್ಥಾನ ಕೊಡಿ ಎಂದು ಕೇಳಲ್ಲ. ದೇವರ ಅನುಗ್ರಹ ಇದ್ದರೆ ಮಂತ್ರಿ ಆಗುವೆ. ಪಕ್ಷವೇ ನನಗೆ ಮಂತ್ರಿ ಸ್ಥಾನ ಕೊಟ್ಟರೆ ಆಗುತ್ತೇನೆ. ಆನಂದ್ ಸಿಂಗ್ ಅವರು ಸಹೋದರನ ರೀತಿ ಇದ್ದಾರೆ. ಹೀಗಾಗಿ ನನಗೆ ಸಚಿವ ಸ್ಥಾನದ ಅಗತ್ಯವಿಲ್ಲ ಎಂದರು.
ದೇಶಾದ್ಯಂತ ಪ್ರಧಾನಿ ಮೋದಿ ಅವರ 70ನೇ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಬಳ್ಳಾರಿ ನಗರ ಬಿಜೆಪಿ ಯುವ ಮಾರ್ಚಾ ವತಿಯಿಂದ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಸೇರಿದಂತೆ ನೂರಾರು ಜನ ಬಿಜೆಪಿ ಕಾರ್ಯಕರ್ತರು ರಕ್ತದಾನ ಮಾಡಿ ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಯುವಕರು ರಕ್ತದಾನ ಮಾಡಿ ರೋಗಿಗಳ ಜೀವನ ಉಳಿಸಲು ಮುಂದಾಗಿದ್ದಾರೆ. ಯುವಕರು ದೇಶಕ್ಕೆ ಆಪತ್ತು ಬಂದಾಗ ದೇಶದ ರಕ್ಷಣೆಗೆ ಮುಂದಾಗಬೇಕು. ರಕ್ತದಾನ ಸೇರಿದಂತೆ ವಿವಿಧ ರೀತಿಯ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದರು.