ಐಎಂಎ ಬಳಿಕ ಭಾರತದಲ್ಲಿ ಕೊರೊನಾ ಸಮುದಾಯಕ್ಕೆ ಹಬ್ಬಿದೆ ಎಂದ ಮತ್ತೊಬ್ಬ ತಜ್ಞ

Public TV
2 Min Read
Coronavirus in India

ನವದೆಹಲಿ: ಭಾರತೀಯ ವೈದ್ಯಕೀಯ ಸಂಸ್ಥೆ(ಐಎಂಎ) ದೇಶದಲ್ಲಿ ಕೊರೊನಾ ಸಮುದಾಯ ಮಟ್ಟಕ್ಕೆ ಹಬ್ಬಿದೆ ಎಂದು ಎಚ್ಚರಿಸಿದ ಬೆನ್ನಲ್ಲೇ ಇದೀಗ ಸರ್ ಗಂಗಾರಾಮ್ ಆಸ್ಪತ್ರೆಯ ತಜ್ಞರೊಬ್ಬರು ಸಮುದಾಯಕ್ಕೆ ಹಬ್ಬಿರುವ ಕುರಿತು ತಿಳಿಸಿದ್ದಾರೆ.

ಐಎಂಎ ವರದಿ ಬಳಿಕ ಈ ಕುರಿತು ಪ್ರತಿಕ್ರಿಯಿಸಿರುವ ಸರ್ ಗಂಗಾರಾಮ್ ಆಸ್ಪತ್ರೆಯ ಚೆಸ್ಟ್ ಸರ್ಜರಿ ಕೇಂದ್ರದ ಅಧ್ಯಕ್ಷ ಡಾ.ಅರವಿಂದ್ ಕುಮಾರ್, ಆರಂಭದಲ್ಲಿ ಸಮುದಾಯ ಹರಡುವಿಕೆ ಧಾರಾವಿ ಹಾಗೂ ದೆಹಲಿಯ ಹಲವು ಭಾಗಗಳಲ್ಲಿ ಅಂದರೆ ಸ್ಥಳೀಯ ಮಟ್ಟದಲ್ಲಿ ಮಾತ್ರ ಇತ್ತು. ಆದರೆ ಇದೀಗ ಅದು ಎಲ್ಲೆಡೆ ವ್ಯಾಪಿಸಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಕೊರೊನಾ ಸಮುದಾಯಕ್ಕೆ ಹರಡಿದೆ ಎಂಬ ಐಎಂಎ ವರದಿಯನ್ನು ನಾನು ಶೇ.100ರಷ್ಟು ಒಪ್ಪುತ್ತೇನೆ. ಅಲ್ಲದೆ ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವುದನ್ನು ನೋಡಿದರೆ ಇದು ಆಶ್ಚರ್ಯವೂ ಅಲ್ಲ. ಎಲ್ಲರೂ ಕಣ್ಣಾರೆ ನೋಡುತ್ತಿರುವುದನ್ನು ಐಎಂಎ ಬಹಿರಂಗವಾಗಿ ಹೇಳಿದೆ. ದೇಶದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದು ಮಾರಣಾಂತಿಕ ವೈರಸ್ ಸಮುದಾಯಕ್ಕೆ ಹರಡಿರುವ ಕುರಿತ ಫಲಿತಾಂಶವಾಗಿದೆ ಎಂದು ಅರವಿಂದ್ ಕುಮಾರ್ ತಿಳಿಸಿದ್ದಾರೆ.

ಅಲ್ಲದೆ ಐಎಂಎ ಆಸ್ಪತ್ರೆಗಳ ಮಂಡಳಿಯ ಅಧ್ಯಕ್ಷ ಡಾ.ವಿ.ಕೆ.ಮೊಂಗಾ ಅವರು ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿ, ಇದೀಗ ಕೊರೊನಾ ಭಾರೀ ಪ್ರಮಾಣದಲ್ಲಿ ಬೆಳೆದಿದೆ. ಪ್ರತಿ ದಿನ ಸುಮಾರು 30 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ. ನಿಜವಾಗಿಯೂ ರಾಷ್ಟ್ರಕ್ಕೆ ಇದು ಕೆಟ್ಟ ಪರಿಸ್ಥಿತಿಯಾಗಿದೆ. ಗ್ರಾಮೀಣ ಪ್ರದೇಶಗಳಿಗೂ ಸೋಂಕು ಹಬ್ಬುತ್ತಿದೆ. ಇದು ಕೆಟ್ಟ ಸಂಕೇತ, ಇದೀಗ ಸಮುದಾಯಕ್ಕೆ ಹಬ್ಬಿರುವುದನ್ನು ಇದು ತೋರಿಸುತ್ತಿದೆ ಎಂದು ಡಾ.ಮೊಂಗಾ ಕಳವಳ ವ್ಯಕ್ತಪಡಿಸಿದ್ದಾರೆ.

coronavirus 4833754 1920

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 38902 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10.77 ಲಕ್ಷಕ್ಕೆ ಏರಿಕೆಯಾಗಿದೆ. ಇದರಲ್ಲಿ 677422 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು 373379 ಸಕ್ರಿಯ ಪ್ರಕರಣಗಳಿವೆ. ಅಲ್ಲದೆ ಕೊರೊನಾಗೆ ಸಂಬಂಧಿಸಿದ 543 ಜನ ಸೇರಿ ಒಟ್ಟು 26816 ಜನ ಕಳೆದ 24 ಗಂಟೆಗಳಲ್ಲಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸ್ಪಷ್ಟಪಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *