ಹುಬ್ಬಳ್ಳಿ: ವಿಧವೆಗೆ ವಂಚಿಸಿದ್ದ ಆರೋಪಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಅಶೋಕ ನಗರ ಠಾಣೆಯ ಪೊಲೀಸರಲ್ಲಿ ಆತಂಕ ಶುರುವಾಗಿದೆ.
ಡಿವೋರ್ಸ್ ಮ್ಯಾಟ್ರಿಮೋನಿಯಲ್ ಮೂಲಕ ಪರಿಚಯ ಮಾಡಿಕೊಂಡಿದ್ದ ಬೆಂಗಳೂರು ಮೂಲದ 33 ವರ್ಷದ ವ್ಯಕ್ತಿ ವಂಚಿಸಿ ಪರಾರಿಯಾಗಿದ್ದ. ಈತನನ್ನು ಹಿಡಿದು ತಂದ ಅಶೋಕ ನಗರ ಠಾಣೆ ಪೊಲೀಸರಲ್ಲಿ ಇದೀಗ ಕೊರೊನಾಂತಕ ಶುರುವಾಗಿದೆ.
ಆರೋಪಿ, ಡಿವೋರ್ಸ್ ಮ್ಯಾಟ್ರಿಮೋನಿಯಲ್ ಆ್ಯಪ್ ಮೂಲಕ ಅಶೋಕ ನಗರದ ವಿಧವೆಯೊಬ್ಬರನ್ನ ಪರಿಚಯ ಮಾಡಿಕೊಂಡು ಮದುವೆಯಾಗುವುದಾಗಿ ನಂಬಿಸಿದ್ದ. ನಂತರ ವೈಯಕ್ತಿಕ ಸಮಸ್ಯೆ ನೆಪದಲ್ಲಿ 76 ಸಾವಿರ ರೂಪಾಯಿ ನಗದು, 30 ಗ್ರಾಂ ಚಿನ್ನ, 1 ಮೊಬೈಲ್ ಪಡೆದು ವಂಚಿಸಿದ್ದ. ಈ ಕುರಿತು ಮಹಿಳೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ನಂತರ ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದ ಪೊಲೀಸರು ಈತನ ಆರೋಗ್ಯ ತಪಾಸಣೆ ನಡೆಸಿದಾಗ ಸೋಂಕು ದೃಢಪಟ್ಟಿದ್ದು, ಸೋಂಕಿತನ ಪ್ರಾಥಮಿಕ ಸಂಪರ್ಕ ಹೊಂದಿದ್ದ ಇನ್ಸ್ ಪೆಕ್ಟರ್ ಸೇರಿ 17 ಜನ ಕ್ವಾರಂಟೈನ್ ಆಗಿದ್ದು ಇದರಿಂದ ಅಶೋಕ ನಗರ ಪೊಲೀಸ್ ಠಾಣೆ ಸಿಬ್ಬಂದಿಯಲ್ಲಿ ಆತಂಕ ಶುರುವಾಗಿದೆ.