ಬೆಂಗಳೂರು: ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಅವಾಂತರ ಸೃಷ್ಟಿಸಿದೆ. ಯಾದಗಿರಿಯಲ್ಲಿ ಮಳೆ ಅಬ್ಬರಕ್ಕೆ ಹಳ್ಳ, ಕೊಳ್ಳ, ಹೊಲ-ಗದ್ದೆ ಸೇರಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು ಲಕ್ಷಾಂತರ ರೂ. ಮೌಲ್ಯದ ಬೆಳೆ ಹಾನಿಯಾಗಿದೆ. ಬೆಳೆಹಾನಿಯಿಂದ ಕಂಗಾಲಾದ ಶಹಾಪೂರದ ರೈತ ವಿಡಿಯೋ ಮೂಲಕ ಅಳಲು ತೋಡಿಕೊಂಡಿದ್ದಾನೆ.
ಉಡುಪಿಯಲ್ಲಿ ಭಾರೀ ಮಳೆಯಾಗಿದ್ದು ಅರಬ್ಬೀ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು ಮಲ್ಪೆ ಬೀಚ್ ಕೊಚ್ಚಿ ಹೋಗಿದೆ. ಇನ್ನು ಚಿಕ್ಕಬಳ್ಳಾಪುರದಲ್ಲಿಯೂ ಮಳೆಯಾಗಿದ್ದು ಜಕ್ಕಲಮಡಗು ಡ್ಯಾಂನಲ್ಲಿ 4 ಅಡಿಯಷ್ಟು ನೀರು ಸಂಗ್ರಹವಾಗಿದೆ. ತುಮಕೂರಿನ ಹಲವೆಡೆ ಮಳೆಯಾಗಿದ್ದು ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ. ತಿಪಟೂರಿನ ಈಡೇನಹಳ್ಳಿಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ರಸ್ತೆಗಳು ಕುಸಿದು ಬಿದ್ದಿವೆ. ಕೆಲವರ ಜಮೀನುಗಳು ಹಾನಿಯಾಗಿದ್ದು ಸ್ಥಳಕ್ಕೆ ಅಧಿಕಾರಿಗಳು ಬಂದಿಲ್ಲ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆ ಸಂಜೆಯಿಂದಲೂ ಹಾಸನ ಜಿಲ್ಲೆಯ ಹಲವೆಡೆ ಭರ್ಜರಿ ಮಳೆಯಾಗಿದೆ. ಚನ್ನರಾಯಪಟ್ಟಣದ ನಂದಿನಿ ಹಾಲು ಉತ್ಪಾದಕ ಘಟಕದಿಂದ ಹೊರಬಂದ ನೀರು ಶೆಟ್ಟಿಹಳ್ಳಿಯ ಜಮೀನುಗಳಿಗೆ ನುಗ್ಗಿ ಕೆರೆಯಂತಾಗಿದೆ. ಇತ್ತ ಕೋಲಾರದ ಚಿಟ್ನಹಳ್ಳಿಯಲ್ಲಿ ಕೆಸಿ ವ್ಯಾಲಿ ಗೇಟ್ ವಾಲ್ನಿಂದ ನೀರು ಪೋಲಾಗಿದೆ. ಕಳೆದ ರಾತ್ರಿಯಿಂದ ಪೋಲಾಗಿ ಹರಿಯುತ್ತಿರುವ ನೀರು 60 ಅಡಿ ಎತ್ತರಕ್ಕೆ ಚಿಮ್ಮುತ್ತಿದೆ. ಸ್ಥಳಕ್ಕೆ ಅಧಿಕಾರಿಗಳು ಬರಲಿಲ್ಲ ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.