ನವದೆಹಲಿ: ಪೂರ್ವ ಲಡಾಕ್ನ ಭಾರತ-ಚೀನಾ ಗಡಿಯ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಸೈನಿಕರ ಮಧ್ಯೆ ನಡೆದ ಸಂಘರ್ಷದಲ್ಲಿ ಚೀನಾದ ಕನಿಷ್ಠ 40 ಯೋಧರು ಸಾವನ್ನಪ್ಪಿರಬಹುದು ಎಂದು ಕೇಂದ್ರ ಸಚಿವ, ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಹೇಳಿದ್ದಾರೆ.
ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಸಂಘರ್ಷದಲ್ಲಿ ಭಾರತದ 20 ಸೈನಿಕರು ಹುತಾತ್ಮರಾದರೆ ಚೀನಾ ಕಡೆ ಅದರ ಪ್ರಮಾಣ ದುಪ್ಪಟ್ಟಿರುವ ಸಾಧ್ಯತೆ ಇದೆ ಎಂದಿದ್ದಾರೆ.
ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ತನ್ನ ದೇಶದ ಎಷ್ಟು ಸೈನಿಕರು ಮೃತಪಟ್ಟಿದ್ದಾರೆ ಎಂದು ಚೀನಾ ಈವರೆಗೆ ಮಾಹಿತಿ ನೀಡಿಲ್ಲ. 1962ರ ಯುದ್ಧ ಸೇರಿದಂತೆ ಯಾವ ಸಂಘರ್ಷದಲ್ಲೂ ಸಾವು-ನೋವಿನ ಮಾಹಿತಿಯನ್ನು ಪ್ರಕಟಿಸಿದ ಉದಾಹರಣೆಯೇ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಭೂ ಪ್ರದೇಶದೊಳಗೆ ಬಂದಿದ್ದ ಚೀನಾ ಸೈನಿಕರನ್ನು ಅವರಿಗೆ ಹಸ್ತಾಂತರ ಮಾಡಲಾಗಿದೆ ಎಂದು ವಿ.ಕೆ ಸಿಂಗ್ ಹೇಳಿದ್ದು ಯಾವುದೇ ಪೂರಕ ದಾಖಲೆಗಳನ್ನು ಒದಗಿಸಿಲ್ಲ ಮತ್ತು ಈ ಸಂಬಂಧ ಪ್ರತಿಕ್ರಿಯೆ ನೀಡಲು ರಕ್ಷಣಾ ಸಚಿವರ ವಕ್ತಾರ ಭರತ್ ಭೂಷಣ್ ಬಾಬು ಕೂಡ ನಿರಾಕರಿಸಿದ್ದಾರೆ.
ಚೀನಾದ ಕನಿಷ್ಠ 30 ಮಂದಿ ಸಾವನ್ನಪ್ಪಿದ್ದರು ಎಂದು ಅಮೇರಿಕ ಗುಪ್ತಚರ ಇಲಾಖೆ ಹೇಳಿತ್ತು ಮತ್ತು ಚೀನಾದ ಕಡೆಯೂ ಸಾವು-ನೋವು ಸಂಭವಿಸಿವೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿತ್ತು.