-ಪತ್ನಿ ನೇಣಿಗೆ ಶರಣು, ರೈಲ್ವೆಗೆ ತಲೆ ಕೊಟ್ಟ ಪತಿ
-ಮೇ 27ರಂದು ಮದ್ವೆಯಾಗಿದ್ದ ಜೋಡಿ
ಚಂಡೀಗಢ: ಪ್ರೇಮ ವಿವಾಹವಾದ ಐದೇ ದಿನಕ್ಕೆ ನವದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹರಿಯಾಣದ ಸೋನಿಪತ್ ಜಿಲ್ಲೆಯ ಇಂಡಿಯನ್ ಕಾಲೋನಿಯಲ್ಲಿ ನಡೆದಿದೆ.
ಮಂಜಿತ್ (25) ಮತ್ತು ಆರತಿ (24) ಆತ್ಮಹತ್ಯೆಗೆ ಶರಣಾದ ನವದಂಪತಿ. ಆರತಿ ಶವ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ್ರೆ, ಮಂಜಿತ್ ಮೃತದೇಹ ರೈಲ್ವೇ ಟ್ರ್ಯಾಕ್ ಮೇಲೆ ಸಿಕ್ಕಿದೆ. ಮೇ 27ರಂದು ಜೋಡಿ ಕುಟುಂಬಸ್ಥರ ಸಮ್ಮುಖದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿತ್ತು.
ಮಯೂರ ವಿಹಾರ ನಿವಾಸಿಯಾಗಿರೋ ಮಂಜಿತ್ ದೆಹಲಿ ಹೈಕೋರ್ಟ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಪಿನಾನಾ ಗ್ರಾಮದ ನಿವಾಸಿ ಆರತಿಯ ಪರಿಚಯ ಮಂಜಿತ್ಗೆ ಅಗಿತ್ತು. ಕೆಲವೇ ದಿನಗಳಲ್ಲಿ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಇಬ್ಬರ ಪ್ರೇಮಕ್ಕೆ ಎರಡೂ ಕುಟುಂಬಗಳ ಸಮ್ಮತಿ ಸೂಚಿಸಿ ಮದುವೆ ಸಹ ಮಾಡಿದ್ದರು. ಭಾನುವಾರ ಇಬ್ಬರ ಮಧ್ಯೆ ಜಗಳ ನಡೆದಿದೆ ಎನ್ನಲಾಗಿದ್ದು, ಇದೇ ವಿಷಯಕ್ಕೆ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.
ಇಂದು ಬೆಳಗ್ಗೆ 7 ಗಂಟೆಯಾದ್ರೂ ಆರತಿ ತನ್ನ ಕೋಣೆಯಿಂದ ಹೊರ ಬರದಿದ್ದಾಗ ಕುಟುಂಬಸ್ಥರಿಗೆ ಆತಂಕಗೊಂಡು ಬಾಗಿಲು ತಟ್ಟಿದ್ದಾರೆ. ಒಳಗಡೆಯಿಂದ ಲಾಕ್ ಆಗಿದ್ದರಿಂದ ಬಾಗಿಲು ಒಡೆದಾಗ ಆರತಿ ಶವ ಪತ್ತೆಯಾಗಿದೆ. ಕೂಡಲೇ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿ ಪೊಲೀಸರು ಆರತಿ ಶವವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪತಿ ಮಂಜಿತ್ ಶವ ರೈಲ್ವೇ ಟ್ರ್ಯಾಕ್ ಮೇಲೆ ಸಿಕ್ಕಿದೆ. ಮೇಲ್ನೋಟಕ್ಕೆ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗ್ತಿದ್ದು, ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ ವಿಜೇಂದ್ರ, ವಿಷಯ ತಿಳಿಯತ್ತಿದ್ದಂತೆ ಸ್ಥಳಕ್ಕೆ ತೆರಳಿ ಎರಡು ಶವಗಳನ್ನು ವಶಕ್ಕೆ ಪಡೆದು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಜೋಡಿ ಮೇ 27ರಂದು ಮದ್ವೆ ಆಗಿರುವ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.