ನೆಲಮಂಗಲ: ‘ಮನೆಯೇ’ ಮಂತ್ರಾಲಯ ಕಾರ್ಯಕ್ರಮಕ್ಕೆ ನೆಲಮಂಗಲ ವಿಧಾನ ಸಭಾ ಕ್ಷೇತ್ರದ ಸೋಲೂರು ಬಳಿಯ ಕಲ್ಯಾಣಪುರ ಗ್ರಾಮದ ನಿವಾಸಿ ಭಾಗ್ಯ ಎಂಬವರು ತಮ್ಮ ಮಗನ ವಿಚಾರದಲ್ಲಿ ನೋವನ್ನ ಹೇಳಿಕೊಂಡಿದ್ದರು.
ಮಗನಿಗೆ ಅಂಗಾಂಗಗಳು ಸ್ವಾಧೀನ ಇಲ್ಲ, ಮಾತನಾಡಲ್ಲ. ಲಾಕ್ ಡೌನ್ ಸಮಯದಲ್ಲಿ ಈ ಮಗುವಿಗೆ ಔಷಧಿ ಹಾಗೂ ಆಹಾರದ ಸಮಸ್ಯೆ ಇದೆ ಎಂದು ಹೇಳಿಕೊಂಡಿದ್ದರು. ಇದೀಗ ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಮಲ್ಲಯ್ಯ ಎಂಬವರು ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ. ಮಗುವಿಗೆ ಔಷಧಿ, ಮಾತ್ರೆ ಹಾಗೂ ಒಂದು ತಿಂಗಳಿಗೆ ಬೇಕಾಗುವಷ್ಟು ದಿನಸಿ ಪದಾರ್ಥಗಳನ್ನ ನೀಡಿ ಪಬ್ಲಿಕ್ ಟಿವಿಯ ಸಾಮಾಜಿಕ ಕಳಕಳಿಯ ಕಾರ್ಯಕ್ರಮಕ್ಕೆ ಸ್ಪಂದಿಸಿದ್ದಾರೆ.
ಈ ವೇಳೆ ಮಾತನಾಡಿದ ಅಧ್ಯಕ್ಷ ಮಲ್ಲಯ್ಯ, ಸಾಕಷ್ಟು ಜನರು ತಮ್ಮ ನೋವನ್ನ ಅಕ್ಕಪಕ್ಕದ ಜನರಲ್ಲಿ ಹೇಳಿಕೊಳ್ಳಲಾಗದೆ ಈ ಕೊರೊನಾ ವೈರಸ್ ನ ಲಾಕ್ ಡೌನ್ ಸಮಯದಲ್ಲಿ ಸಮಸ್ಯೆಯನ್ನ ಅನುಭವಿಸುತ್ತಿದ್ದಾರೆ. ಜನರ ಸಮಸ್ಯೆ ಆಲಿಸುವ ನಿಟ್ಟಿನಲ್ಲಿ ಪಬ್ಲಿಕ್ ಟಿವಿಯ ತಂಡ ಉತ್ತಮ ಕೆಲಸ ನಿರ್ವಹಿಸಿ ಜನ ಸಾಮಾನ್ಯರ ಸ್ಪಂದನೆಗೆ ಕೆಲಸ ಮಾಡುತ್ತಿದೆ ಎಂದರು. ಇದೇ ವೇಳೆ ನೆರವಿಗೆ ಧಾವಿಸಿದ ಎಲ್ಲರಿಗೂ ನೊಂದ ಬಡ ಕುಟುಂಬ ಕೃತಜ್ಞತೆ ತಿಳಿಸಿದೆ.