ಮಡಿಕೇರಿ: ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ದೇಶವೇ ಲಾಕ್ಡೌನ್ ಆಗಿದ್ದು, ಪರಿಣಾಮ ಪ್ರವಾಸೋದ್ಯಮ ಸಂಪೂರ್ಣ ಬಂದ್ ಆಗಿದೆ. ಆದರೆ ಪ್ರವಾಸೋದ್ಯಮವನ್ನೇ ನಂಬಿ ನಡೆಯುತ್ತಿದ್ದ ಹೋಟೆಲ್, ರೆಸಾರ್ಟ್ ಮತ್ತು ಹೋಂಸ್ಟೇ ಉದ್ಯಮ ಸಂಪೂರ್ಣ ನಲುಗಿ ಹೋಗಿದೆ.
ಭಾರತದ ಸ್ಕಾಟ್ಲ್ಯಾಂಡ್, ದಕ್ಷಿಣ ಭಾರತದ ಕಾಶ್ಮೀರ ಎಂದೇ ಖ್ಯಾತಿ ಆಗಿರುವ ಕೊಡಗು ಪ್ರವಾಸಿಗರ ನೆಚ್ಚಿನ ಜಿಲ್ಲೆ. ಆದರೆ ಲಾಕ್ಡೌನ್ ಪರಿಣಾಮವಾಗಿ ಪ್ರವಾಸೋದ್ಯಮ, ಹೋಟೆಲ್ ರೆಸಾರ್ಟ್, ರೆಸ್ಟೋರೆಂಟ್ ಗಳು ಬಂದ್ ಆಗಿವೆ.
ಕೊಡಗು ಜಿಲ್ಲೆಯಲ್ಲಿ ಬರೋಬ್ಬರಿ 300 ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಿದೆ. ಅಲ್ಲದೆ ಇದನ್ನೇ ನಂಬಿದ್ದ 30 ಸಾವಿರಕ್ಕೂ ಹೆಚ್ಚು ಕುಟುಂಬಗಳು ಅತಂತ್ರ ಸ್ಥಿತಿ ತಲುಪಿ ತೀವ್ರ ಸಂಕಷ್ಟ ಎದುರಿಸುತ್ತಿವೆ. ಹೋಟೆಲ್, ರೆಸಾರ್ಟ್ ಮತ್ತು ಹೋಂಸ್ಟೇ ಮಾಲೀಕರು ಕೂಡ ಸಮಸ್ಯೆಗೆ ಸಿಲುಕಿದ್ದಾರೆ. ಹೋಟೆಲ್ ರೆಸಾರ್ಟ್ ಮತ್ತು ಹೋಂಸ್ಟೇಗಳನ್ನು ಪುನಃ ಪ್ರಾರಂಭಿಸುವುದಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು ದುಡಿಮೆಗಿಂತ ಜನರ ಆರೋಗ್ಯ ಮುಖ್ಯ. ಹೀಗಾಗಿ ಸದ್ಯಕ್ಕೆ ಯಾವುದೇ ಕಾರಣಕ್ಕೂ ಹೋಟೆಲ್, ರೆಸಾರ್ಟ್ ಮತ್ತು ಹೋಂಸ್ಟೇಗಳನ್ನು ತೆರೆಯಲು ಬಿಡುವುದಿಲ್ಲ. ಅದಕ್ಕೆ ಮಾಲೀಕರು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ. ಹೋಟೆಲ್, ರೆಸಾರ್ಟ್ ಮತ್ತು ಹೋಂಸ್ಟೇಗಳನ್ನು ನಂಬಿದ್ದ ಕಾರ್ಮಿಕರಿಗೆ ಕಿಟ್ ಅಥವಾ ಪರಿಹಾರ ಕೊಡಿಸಲು ಮಾತನಾಡುತ್ತೇನೆ ಎಂಬ ಭರವಸೆಯನ್ನು ನೀಡಿದ್ದಾರೆ.