ರಾಯಚೂರು: ತಾಲೂಕಿನ ಪಲ್ಕಂದೊಡ್ಡಿಯ ರೈತ ಬಸವರಾಜ ಎರಡು ಎಕರೆಯಲ್ಲಿ ಬೆಳೆದಿದ್ದ ಬದನೆಕಾಯಿ ಬೆಳೆಯನ್ನು ಲಾಕ್ಡೌನ್ ಹಿನ್ನೆಲೆ ತಾನೇ ಕಿತ್ತು ಹಾಕುತ್ತಿದ್ದಾರೆ.
ಮೂರು ತಿಂಗಳ ಹಿಂದೆ ರೈತ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬದನೆ ನಾಟಿಮಾಡಿದ್ದರು. ಕಳೆದೊಂದು ತಿಂಗಳಿನಿಂದ ಬದನೆಕಾಯಿ ಇಳುವರಿ ಬರುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆಯಿಲ್ಲ. ಹೀಗಾಗಿ ಬೆಳೆಯನ್ನೇ ಕಿತ್ತುಹಾಕಿದ್ದಾರೆ. ಬೇಸಿಗೆಯ ಕಾಲ ಮದುವೆಗಳ ಕಾಲ ಎನ್ನುವ ವಾಡಿಕೆ. ಆದರೆ ಈ ಬಾರಿ ಬೇಸಿಗೆಯಲ್ಲಿ ಕೊರೊನಾ ತಡೆಯಲು ಲಾಕ್ಡೌನ್ ಮಾಡಲಾಗಿದೆ. ಇದರಿಂದ ಕೆಲ ಮದುವೆಗಳು ಸರಳವಾಗಿ ನಡೆದರೆ, ಬಹಳಷ್ಟು ಜನ ಮುಹೂರ್ತವನ್ನು ಮುಂದೂಡಿದ್ದಾರೆ.
ಮದುವೆಯ ಊಟಕ್ಕೆ ಬದನೆಕಾಯಿ ಸಾಕಷ್ಟು ಪ್ರಮಾಣದಲ್ಲಿ ಬಳಕೆಯಾಗುತ್ತೆ. ಇದರಿಂದ ಬೇಸಿಗೆಯಲ್ಲಿ ಇಳುವರಿ ಬರುವ ಬದನೆಕಾಯಿಯು ಲಾಭ ತರುತ್ತದೆ ಎಂಬ ಭರವಸೆಯಿಂದ ಬದನೆ ಬೆಳೆದಿದ್ದರು. ಈಗ ಮಾರುಕಟ್ಟೆಯಲ್ಲಿ 16 ಕೆಜಿಯ ಬದನೆಕಾಯಿ ಒಂದು ಚೀಲಕ್ಕೆ ಕೇವಲ 30ರೂ ದರ ನಿಗದಿಯಾಗುತ್ತಿದೆ. ಲಾಕ್ಡೌನ್ ಹಿನ್ನೆಲೆ ಮದುವೆ, ಇತರೆ ಕಾರ್ಯಕ್ರಮಗಳೂ ಇಲ್ಲದಿರುವುದರಿಂದ ಕೊಳ್ಳುವವರೂ ಇಲ್ಲ. ಉತ್ತಮ ಬೆಲೆ ಸಿಗುವ ಭರವಸೆಯಿಲ್ಲದ ಹಿನ್ನೆಲೆ ಬದನೆ ಗಿಡವನ್ನು ಕಿತ್ತು ಹಾಕುತ್ತಿದ್ದಾರೆ.
ಒಂದು ವೇಳೆ ಬೆಳೆಯನ್ನು ಹಾಗೆ ಬಿಟ್ಟರೆ ಔಷಧಿ, ಗೊಬ್ಬರಕ್ಕೆ ಖರ್ಚು ಮಾಡಬೇಕಾಗುತ್ತದೆ. ಆಗ ಆಗುವ ಹಾನಿಗೆ ದೊಡ್ಡ ಸಾಲಗಾರನಾಗಬೇಕಾಗುತ್ತದೆ ಎಂದು ಈಗಲೇ ಬೆಳೆಯನ್ನು ತೆಗೆಯುತ್ತಿರುವುದಾಗಿ ರೈತ ಬಸವರಾಜ್ ತಮ್ಮ ಅಳಲು ತೋಡಿಕೊಂಡಿದ್ದಾರೆ.