ಚಿಕ್ಕಬಳ್ಳಾಪುರ: ಪದೇ ಪದೇ ಕೆಮ್ಮುತ್ತಿದ್ದಕ್ಕೆ ಕೊರೊನಾ ಬಂದಿದೆ ಅಂತ ಸ್ನೇಹಿತರು ಅಪಹಾಸ್ಯ ಮಾಡಿದ್ದಕ್ಕೆ ರೊಚ್ಚಿಗೊದ್ದ ಯುವಕ ಮಚ್ಚುಹಿಡಿದು ಹುಚ್ಚಾಟ ನಡೆಸಿದ ಘಟನೆ ಶಿಡ್ಲಘಟ್ಟ ತಾಲೂಕಿನ ಹಿತ್ತಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹಿತ್ತಲಹಳ್ಳಿ ಗ್ರಾಮದ ಹರೀಶ್ ಮಚ್ಚುಹಿಡಿದು ಹುಚ್ಚಾಟ ನಡೆಸಿದ ಯುವಕ. ಹರೀಶ್ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದಾನೆ. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಗ್ರಾಮದಲ್ಲಿನ ಹರೀಶ್ ಸ್ನೇಹಿತರು ಸುಖಾಸುಮ್ಮನೆ ಕೊರೊನಾ ಬಂದಿದೆ ಅಂತ ರೇಗಿಸುತ್ತಿದ್ದರು. ಇದರಿಂದ ಕೋಪಗೊಂಡ ಯುವಕ ಹರೀಶ್ ಮಚ್ಚು ಹಿಡಿದು ಬಂದು ಹುಚ್ಚಾಟ ಮೆರೆದಿದ್ದಾನೆ. ಈ ವಿಡಿಯೋವನ್ನ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ಕಂಡ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಯುವಕನಿಗಾಗಿ ಹುಡುಕಾಡ ನಡೆಸಿದ್ದಾರೆ.
ಪೊಲೀಸರು ಹುಡಾಕಾಡುತ್ತಿರುವ ವಿಷಯ ತಿಳಿದ ಹರೀಶ್ ಊರು ಬಿಟ್ಟು ನಾಪತ್ತೆಯಾಗಿದ್ದಾನೆ. ಹಿತ್ತಲಹಳ್ಳಿ ಗ್ರಾಮದ ಯುವಕರು ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಮಾದರಿಯಾಗಿದ್ದರು. ಆದರೆ ಈಗ ಯುವಕ ಹರೀಶ್ನ ಹುಚ್ಚಾಟದಿಂದ ಹಿತ್ತಲಹಳ್ಳಿ ಗ್ರಾಮಕ್ಕೆ ಕೆಟ್ಟು ಹೆಸರು ಬರುವಂತಾಗಿದೆ ಅಂತ ಗ್ರಾಮಸ್ಥರು ನೊಂದುಕೊಂಡಿದ್ದಾರೆ.