ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವಿಧಾನಸೌಧದಲ್ಲಿ ಕೂಡ ಸಚಿವರು ಹಾಗೂ ಶಾಸಕರಿಗೆ ಇಂದು ಪರೀಕ್ಷೆ ನಡೆಸಲಾಯಿತು.
ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕೊರೊನಾ ಸ್ಕ್ರೀನಿಂಗ್ ಮಾಡಿಸಿಕೊಂಡರು. ಈ ವೇಳೆ ಟೆಸ್ಟ್ ಮಾಡುವವರನ್ನು ನೀವು ವೈದ್ಯರಾ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು. ಆಗ ಸಿಬ್ಬಂದಿ ನಾವು ತಾಪಮಾನ ಟೆಸ್ಟ್ ಮಾಡುವವರು ಎಂದು ತಿಳಿಸಿದ್ದಾರೆ.
99 ಮೇಲೆ ನಂಬರ್ ಬಂದ್ರೆ ಕೊರೊನಾ ಅಂತ ಅರ್ಥನಾ..?, ನಂಗೆ 93.4 ಇದೆ ಅಲ್ವಾ ಪರವಾಗಿಲ್ಲ. ನಂಗೆ ಕೊರೊನಾ ಭೀತಿ ಇಲ್ಲ ಅಲ್ವಾ ಎಂದು ಹ್ಯಾಂಡ್ ಸ್ಯಾನಿಟೈಸರ್ ಬಳಕೆ ಮಾಡಿ ವಿಧಾನಸಭೆಗೆ ತೆರಳಿದರು.
ಇದಕ್ಕೂ ಮೊದಲು ಮಾತನಾಡಿದ ಮಾಜಿ ಸಿಎಂ, ಅಧಿವೇಶನ ನಡೆಯುತ್ತಿರುವ ಸಂಧರ್ಭದಲ್ಲಿ ಆರೋಗ್ಯ ಸಚಿವರಾಗಲೀ ಅಥವಾ ವೈದ್ಯಕೀಯ ಶಿಕ್ಷಣ ಸಚಿವರಾಗಲೀ ಕೊರೊನಾ ನಿಯಂತ್ರಣ ಕುರಿತು ಸದನದಲ್ಲಿ ಒಂದು ಹೇಳಿಕೆ ನೀಡಬೇಕು. ದಿನ ದಿನದ ಮಾಹಿತಿ ನೀಡಬೇಕು. ನಿರೀಕ್ಷಿತ ಪ್ರಮಾಣದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲು ಸರ್ಕಾರ ಮುಂದಾಗಬೇಕು. ಕಲಬುರಗಿಯಲ್ಲಿ ಕೊರೊನಾದಿಂದ ಸಾವಾಗಿದೆ. ಆದರೆ ಇನ್ನೂ ಅಲ್ಲಿ ಪರೀಕ್ಷಾ ಲ್ಯಾಬ್ ಮಾಡಿಲ್ಲ. ಸದನ ಮುಂದೂಡುವ ಕುರಿತು ಸದನ ಸಲಹಾ ಸಮಿತಿಯಲ್ಲಿ ಚರ್ಚೆ ಮಾಡ್ತೇವೆ ಎಂದು ತಿಳಿಸಿದರು.
ಥರ್ಮಲ್ ಸ್ಕ್ಯಾನರ್ ಮೂಲಕ ಮನುಷ್ಯನ ದೇಹದ ತಾಪಮಾಣವನ್ನು ಅಳೆಯಲಾಗುತ್ತಿದೆ. ದೇಹದ ತಾಪಮಾನ ತುಸು ಹೆಚ್ಚುಕಡಿಮೆ 98.6 ಡಿಗ್ರಿ ಫ್ಯಾರನ್ಹೀಟ್ ಅಥವಾ 37 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆದರೆ ಥರ್ಮಲ್ ಸ್ಕ್ಯಾನರ್ ನಿಂದ ತಪಾಸಣೆಗೆ ಒಳಪಟ್ಟ ವ್ಯಕ್ತಿಯ ದೇಹದ ತಾಪಮಾನ 98.6 ಡಿಗ್ರಿ ಫ್ಯಾರನ್ಹೀಟ್ಗಿಂತ ಅಧಿಕವಾಗಿದ್ದರೆ ಅವರನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಲಾಗುತ್ತದೆ.
ಥರ್ಮಲ್ ಸ್ಕ್ಯಾನರ್ ಯಾಕೆ?
ಕೊರೊನಾ ವೈರಸ್ ಇರುವವರಿಗೆ ಜ್ವರ, ಕೆಮ್ಮು ಪ್ರಮುಖ ಲಕ್ಷಣಗಳಾಗಿವೆ. ಇಂತಹ ಸಂದರ್ಭದಲ್ಲಿ ಹಲವರು ತಮಗೆ ಜ್ವರ ಇರುವ ಕುರಿತು ಮಾಹಿತಿ ಕೊಡಲು ಹಿಂಜರಿಯುತ್ತಾರೆ. ಇದಲ್ಲದೇ ಈಗಿರುವ ಹಳೆಯ ತಂತ್ರಜ್ಞಾನ ಬಳಸಿ ಸಾವಿರಾರು ಜನರನ್ನು ಪರೀಕ್ಷೆ ಮಾಡಲು ವೈದ್ಯರಿಗೆ ಕಷ್ಟಸಾಧ್ಯ. ಹೀಗಾಗಿ ತಕ್ಷಣ ಪರೀಕ್ಷಿಸಲು ಜ್ವರದ ತೀವ್ರತೆ ತಿಳಿದುಕೊಳ್ಳಲು ಥರ್ಮಲ್ ಸ್ಕ್ಯಾನರ್ ತಕ್ಷಣದಲ್ಲಿ ಉಪಯೋಗಕ್ಕೆ ಬರುತ್ತದೆ. ಈ ಕಾರಣದಿಂದ ಇದರ ಬಳಕೆ ವೈದ್ಯರಿಗೆ ರೋಗಿಯ ದೇಹಸ್ಥಿತಿ ಅರಿಯಲು ಸಹಕಾರಿಯಾಗುತ್ತದೆ.