ಬೆಂಗಳೂರು: ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ಅಸ್ಪೃಶ್ಯತೆಯ ಕದನವೇ ನಡೆದು ಹೋಯ್ತು. ಸಂವಿಧಾನದ ಮೇಲೆ ನಡೆದ ಚರ್ಚೆಯಲ್ಲಿ ಕಾಂಗ್ರೆಸ್ ಸದಸ್ಯ ಆರ್.ಬಿ ತಿಮ್ಮಾಪುರ್ ಮಾತಿಗೆ ಬಿಜೆಪಿ ಸದಸ್ಯರು ವಾಗ್ಬಾಣಗಳನ್ನ ಬಿಡುವ ಮೂಲಕ ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್, ಬಿಜೆಪಿ ಇತಿಹಾಸಗಳ ಜೊತೆ ಅಸ್ಪೃಶ್ಯತೆಯ ಕದನವೇ ಕಲಾಪದಲ್ಲಿ ನಡೆದು ಹೋಯಿತು.
ವಿಧಾನ ಪರಿಷತ್ತಿನಲ್ಲಿ ಸಂವಿಧಾನದ ಮೇಲೆ ಚರ್ಚೆ ಮುಂದುವರಿಯಿತು. ಕಾಂಗ್ರೆಸ್ ಸದಸ್ಯ ತಿಮ್ಮಾಪುರ್ ಈಗಲೂ ದಲಿತರನ್ನ ಅಸ್ಪೃಶ್ಯರಾಗಿಯೇ ಇಟ್ಟಿದ್ದಾರೆ. ಈಗಲೂ ದಲಿತರ ಮೇಲೆ ಶೋಷಣೆ ಆಗುತ್ತಿದೆ ಅಂತ ಆರೋಪ ಮಾಡಿದರು. ಇದೇ ವೇಳೆ ಬಿಜೆಪಿ ವಿರುದ್ಧ ಗುಡುಗಿದ ಅವರು, ರಾಮಮಂದಿರ ನಿರ್ಮಾಣ ಮಾಡ್ತೀನಿ ಅಂತ ಬಿಜೆಪಿಯವರು ಹೇಳ್ತಿದ್ದಾರೆ. ನಮ್ಮಲ್ಲಿ ದಲಿತರನ್ನ ದೇವಸ್ಥಾನ ಒಳಗೆ ಹೋಗಲು ಬಿಡೋದಿಲ್ಲ. ಇನ್ನು ರಾಮ ಮಂದಿರಕ್ಕೆ ನಮ್ಮನ್ನ ಬಿಡ್ತಾರಾ ಬಿಜೆಪಿ ಅವರು ದಲಿತರನ್ನ ಈಗಲೂ ಅಸ್ಪೃಶ್ಯರಂತೆ ನೋಡ್ತಾರೆ ಅಂತ ಬಿಜೆಪಿ ವಿರುದ್ಧ ಕಿಡಿಕಾರಿದರು.
ತಿಮ್ಮಾಪುರ್ ಮಾತಿಗೆ ಬಿಜೆಪಿ ಪ್ರಾಣೇಶ್ ವಿರೋಧ ವ್ಯಕ್ತಪಡಿಸಿದರು. ಬಾಬು ಜಗಜೀವನರಾಮ್ ಅವರನ್ನ ಪ್ರಧಾನಿ ಮಾಡಲು ಜನತಾ ಪಾರ್ಟಿ, ಬಿಜೆಪಿ ಅವರು ಮುಂದಾದ್ರು. ಆದರೆ ಕಾಂಗ್ರೆಸ್ ಅವರು ಅದಕ್ಕೆ ಅವಕಾಶ ಕೊಡಲಿಲ್ಲ. ಕಾಂಗ್ರೆಸ್ ನಿಜವಾದ ದಲಿತರ ವಿರೋಧಿ ಅಂತ ಕಿಡಿಕಾರಿದರು. ಸಚಿವ ಸುಧಾಕರ್ ಮಾತನಾಡಿ, ಅಂಬೇಡ್ಕರ್ ಗೆ ಭಾರತರತ್ನ ಕಾಂಗ್ರೆಸ್ ಅವರು ಕೊಡಲಿಲ್ಲ. ನೆಹರು ಅವರು ಭಾರತರತ್ನ ತಗೊಂಡ್ರು, ಇಂದಿರಾಗಾಂಧಿ ಭಾರತರತ್ನ ತಗೊಂಡ್ರು. ಆದರೆ ಅಂಬೇಡ್ಕರ್ ಗೆ ಮಾತ್ರ ಭಾರತರತ್ನ ಕೊಡಲಿಲ್ಲ. ಅಂಬೇಡ್ಕರ್ ಗೆ ಭಾರತರತ್ನ ಕೊಟ್ಟಿದ್ದು ವಾಜಪೇಯಿ ಅವರು ಅಂತ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರ ಹಾಕಿದರು.
ಇಷ್ಟಕ್ಕೆ ಸುಮ್ಮನೆ ಆಗದ ಸಚಿವ ಸುಧಾಕರ್ ಕಾಂಗ್ರೆಸ್ ಸದಸ್ಯರನ್ನ ತರಾಟೆಗೆ ತೆಗೆದುಕೊಂಡರು. ಬಿಜೆಪಿ ಹಿಂದುಳಿದ ವ್ಯಕ್ತಿಯೊಬ್ಬರನ್ನ ದೇಶದ ಪ್ರಧಾನಿ ಮಾಡಿದೆ. ದಲಿತರೊಬ್ಬರನ್ನ ಬಿಜೆಪಿ ದೇಶದ ರಾಷ್ಟ್ರಪತಿಯನ್ನಾಗಿ ಮಾಡಿದೆ. ಕಾಂಗ್ರೆಸ್ಸಿನವರು ಹಿಂದುಳಿದ ವರ್ಗದವರನ್ನ ಪ್ರಧಾನಿ ಮಾಡಿದ ಉದಾಹರಣೆ ಇದೆಯಾ ಅಂತ ತಿಮ್ಮಾಪುರ್ ಅವ್ರಿಗೆ ಪ್ರಶ್ನೆ ಮಾಡಿದರು. ಬಿಜೆಪಿ ರವಿಕುಮಾರ್ ಮಾತನಾಡಿ ಅಂಬೇಡ್ಕರ್ ಸತ್ತಾಗ ಬಾಡಿಯನ್ನ ರವಾನೆ ಮಾಡೋಕೆ ಫ್ಲೈಟ್ ಚಾರ್ಜ್ ಕಾಂಗ್ರೆಸ್ ಅವರು ಕೊಟ್ಟಿರಲಿಲ್ಲ ಅಂತ ಕಾಂಗ್ರೆಸ್ ವಿರುದ್ಧ ರವಿಕುಮಾರ್ ವಾಗ್ದಾಳಿ ನಡೆಸಿದರು.
ಇಷ್ಟಕ್ಕೆ ಸುಮ್ಮನೆ ಆಗದ ತಿಮ್ಮಾಪುರ್ ಅಸ್ಪೃಶ್ಯತೆ ಇನ್ನೂ ಜೀವಂತವಾಗಿಯೇ ಇದೆ. ಬಿಜೆಪಿಯವರು ಅಸ್ಪೃಶ್ಯತೆ ಜೀವಂತವಾಗಿ ಇಟ್ಟಿದ್ದಾರೆ ಕಿಡಿಕಾರಿದರು. ಇಂದು ದೇವಾಲಯಗಳಿಗೆ ನಾಯಿಗಳು ಬೇಕಾದ್ರೂ ಹೋಗುತ್ತವೆ. ಆದರೆ ಮನುಷ್ಯರು ಹೋಗುವಂತಿಲ್ಲ ಅಸಮಾಧಾನ ಹೊರ ಹಾಕಿದರು. ತಿಮ್ಮಾಪುರ್ ಮಾತಿಗೆ ಕಿಡಿಕಾರಿದ ಸಭಾ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಎಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ ಹೇಳಿ. ಇಂತಹ ದೇವಸ್ಥಾನ ದಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ ಅಂದ್ರೆ ದೇವಾಲಯದ ಮೇಲೆ ಕ್ರಮ ತೆಗೆದುಕೊಳ್ತೀನಿ ಅಂತ ತಿಳಿಸಿದರು. ಅಸ್ಪೃಶ್ಯತೆ ವಿಚಾರವಾಗಿ ಸುಮಾರು 30 ನಿಮಿಷ ಚರ್ಚೆಯಾಗಿ ಸದನದಲ್ಲಿ ಗದ್ದಲ ಗಲಾಟೆಗೂ ಕಾರಣವಾಯಿತು.