ಬೆಂಗಳೂರು: 2023ರಲ್ಲಿ ಹೇಗಾದರೂ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕು ಎಂದು ಜೆಡಿಎಸ್ ವರಿಷ್ಠ ದೇವೇಗೌಡರು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಹೊಸ ಹೊಸ ತಂತ್ರಗಾರಿಕೆಯನ್ನು ಹೆಣೆಯುತ್ತಲೇ ಇದ್ದಾರೆ. 3 ವರ್ಷ ಪಕ್ಷದ ನಾಯಕರು ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳಲು ದೇವೇಗೌಡರು ಈಗ ಸಮಾವೇಶ ಪಾಲಿಟಿಕ್ಸ್ ಪ್ರಾರಂಭ ಮಾಡಿದ್ದಾರೆ.
ಪಕ್ಷವನ್ನು ಅಧಿಕಾರಕ್ಕೆ ತರಲು ದೇವೇಗೌಡರು 4 ದಿಕ್ಕಿಗೂ ಹೊಸ ಟಾರ್ಗೆಟ್ ಫಿಕ್ಸ್ ಮಾಡಿಕೊಂಡಿದ್ದಾರೆ. ನಾಲ್ಕು ದಿಕ್ಕಿನಲ್ಲೂ ಬಲಿಷ್ಠವಾಗಿ ಪಕ್ಷ ಸಂಘಟನೆ ಮಾಡಿ ಅಧಿಕಾರದ ಗದ್ದುಗೆ ಹಿಡಿಯುವ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಇದಕ್ಕಾಗಿ ನಾಲ್ಕು ದಿಕ್ಕಿಗೂ ಬೃಹತ್ ಸಮಾವೇಶ ಮಾಡಿ ಕಾರ್ಯಕರ್ತರ ಪಡೆ ನಿರ್ಮಿಸಲು ದೇವೇಗೌಡರು ತಂತ್ರ ರೂಪಿಸಿದ್ದಾರೆ.
ರಾಜ್ಯದ 4 ಭಾಗಗಳು ಅಂದರೆ ಹಳೆ ಮೈಸೂರು ಭಾಗ, ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ, ಹೈದ್ರಾಬಾದ್ ಮತ್ತು ಮುಂಬೈ ಕರ್ನಾಟಕದಲ್ಲಿ ಬೃಹತ್ ಸಮಾವೇಶ ಮಾಡಿ ಪಕ್ಷ ಬಲವರ್ಧನೆಗೆ ಚಿಂತನೆ ನಡೆಸಿದ್ದಾರೆ. 4-5 ತಿಂಗಳಲ್ಲಿ ಐದಾರು ಸಮಾವೇಶ ಮಾಡಿ ಪಕ್ಷ ಸಂಘಟನೆಗೆ ಪ್ಲಾನ್ ಮಾಡಿಕೊಂಡಿದ್ದಾರೆ. ರೈತ ಸಮಾವೇಶ, ಮಹಿಳಾ ಸಮಾವೇಶ, ಅಲ್ಪಸಂಖ್ಯಾತರ ಸಮಾವೇಶ, ಪರಿಶಿಷ್ಟ ಜಾತಿ-ಪಂಗಡದ ಸಮಾವೇಶ, ಹಿಂದುಳಿದ ವರ್ಗಗಳ ಸಮಾವೇಶ ಮಾಡಿ ಎಲ್ಲಾ ಸಮುದಾಯವನ್ನು ಹಿಡಿದಿಟ್ಟುಕೊಳ್ಳಲು ರಣತಂತ್ರ ರೂಪಿಸಿದ್ದಾರೆ.
ಇಂದು ಮೊದಲ ಸಮಾವೇಶ ಬೆಂಗಳೂರಿನಲ್ಲಿ ನಡೆಯುತ್ತಿದೆ. ಮಾಜಿ, ಹಾಲಿ ಶಾಸಕರು, ಜಿಲ್ಲಾ ಮುಖಂಡರು, ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ಸಮಾವೇಶ ಮುಗಿದ ಬಳಿಕ ನಾಲ್ಕು ಭಾಗಗಳ ಜಿಲ್ಲೆಗಳಲ್ಲಿ ಸಮಾವೇಶ ಆಯೋಜನೆ ಮಾಡಲು ಸಿದ್ಧತೆ ಮಾಡಿದ್ದಾರೆ. ಸಮಾವೇಶಗಳಿಂದ ಕೆಳ ಮಟ್ಟದಿಂದ ಪಕ್ಷ ಕಟ್ಟಬಹುದು. ಕಾರ್ಯಕರ್ತರು, ಮುಖಂಡರು ವಲಸೆ ಹೋಗುವುದು ತಡೆಯಬಹುದು. ಶಕ್ತಿ ಇಲ್ಲದ ಜಿಲ್ಲೆಯಲ್ಲಿ ಪಕ್ಷ ಕಟ್ಟಲು ಸಹಾಯ ಆಗುತ್ತದೆ ಎನ್ನುವುದು ದೇವೇಗೌಡರ ಲೆಕ್ಕಾಚಾರ.