ಬೆಂಗಳೂರು: ಪೌರತ್ವ ಕಾಯ್ದೆ ಜಾರಿಗೆ ಬಂದ ಬೆನ್ನಲ್ಲೇ ಬೆಂಗಳೂರು ನಗರದಲ್ಲಿ ಅಕ್ರಮವಾಗಿ ವಾಸವಿದ್ದ ಬಾಂಗ್ಲಾದೇಶಿಯರನ್ನು ಹುಡುಕುವ ಕೆಲಸಕ್ಕೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು ಮುಂದಾಗಿದ್ದಾರೆ. ಬಾಂಗ್ಲಾದೇಶಿಯರು ನೆಲೆಸುರುವ ಗುಡಿಸಲುಗಳನ್ನು ಬಿಬಿಎಂಪಿ ತೆರವುಗೊಳಿಸುತ್ತಿದೆ. ಈ ತೆರವು ಕಾರ್ಯಾಚರಣೆಯ ಭರಾಟೆಯಲ್ಲಿ ದೇಶದ ನಾಗರಿಕರು ಹಾಗೂ ಉತ್ತರ ಕರ್ನಾಟಕದ ಜನರು ವಾಸವಿರುವ ಶೆಡ್ಗಳನ್ನು ಕೂಡ ತೆರವುಗೊಳಿಸಿ ಬಿಬಿಎಂಪಿ ಸಿಬ್ಬಂದಿ ಮಾಹಾ ಎಡವಟ್ಟು ಮಾಡಿದ್ದಾರೆ.
ಬೆಂಗಳೂರಿನ ಮಹದೇವಪುರ ವ್ಯಾಪ್ತಿಯ ದೇವರಬೀಸನಹಳ್ಳಿ ಹಾಗೂ ಕರಿಯಮ್ಮನ ಅಗ್ರಹಾರದಲ್ಲಿನ ಮಂತ್ರಿ ಇಂಸ್ಟಂಟ್ ಅಪಾರ್ಟ್ಮೆಂಟ್ಗೆ ಹೊಂದಿಕೊಂಡಿರೋ ಕೃಷಿ ಜಮೀನಿನಲ್ಲಿ ಈ ಘಟನೆ ನಡೆದಿದೆ. ಹಲವಾರು ವರ್ಷಗಳಿಂದ ಇಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಶೆಡ್ಗಳಲ್ಲಿ ಉತ್ತರ ಭಾರತೀಯರು ಹಾಗೂ ಉತ್ತರ ಕರ್ನಾಟಕದ ಜನ ಕೂಲಿ ಮಾಡಿಕೊಂಡು ವಾಸವಿದ್ದಾರೆ. ಆದರೆ ಭಾನುವಾರ ಏಕಾಏಕಿ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು ನೀವೆಲ್ಲಾ ಬಾಂಗ್ಲಾದೇಶಿಯರೆಂದು ಆರೋಪಿಸಿ, ಸುಮಾರು 80ಕ್ಕೂ ಹೆಚ್ಚು ಶೆಡ್ಗಳನ್ನ ತೆರವು ಮಾಡಿದ್ದಾರೆ. ತೆರವಿನ ವೇಳೆ ನಿವಾಸಿಗಳು ತಾವು ಭಾರತೀಯರು ಎಂದು ದಾಖಲೆಗಳನ್ನು ತೋರಿಸಿದರೂ ಅದನ್ನು ಬಿಬಿಎಂಪಿ ಸಿಬ್ಬಂದಿ, ಅಧಿಕಾರಿಗಳು ಪರಿಶೀಲಿಸದೆ ಏಕಾಏಕಿ ಶೆಡ್ಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಇಲ್ಲಿನ ಜನರು ಆರೋಪಿಸಿದ್ದಾರೆ.
ಇಲ್ಲಿ ಮೊದಲು ಬಾಂಗ್ಲಾದೇಶಿಯರು ವಾಸಿಸುತ್ತಿದ್ದರು. ಆದರೆ ಹಲವು ದಿನಗಳ ಹಿಂದೆಯೇ ಅವರೆಲ್ಲಾ ಶೆಡ್ಗಳನ್ನು ಬಿಟ್ಟು ಹೊರಟು ಹೋಗಿದ್ದಾರೆ. ಇನ್ನು ಇಲ್ಲಿ ವಾಸಿಸುತ್ತಿರುವ ಬಹುತೇಕರು ಸ್ಥಳೀಯ ಅಪಾರ್ಟ್ಮೆಂಟ್ನಲ್ಲಿ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ದಿನಗೂಲಿಗಳಾಗಿ ಕೆಲಸ ಮಾಡುತ್ತಿದ್ದು, ಒಂದು ಶೆಡ್ಗಳಗೆ ಜಮೀನಿನ ಮಾಲೀಕನಿಗೆ 3 ಸಾವಿರ ರೂ. ಬಾಡಿಗೆ ಕೊಟ್ಟು ವಾಸಿಸುತ್ತಿದ್ದರು.
ಇದೀಗ ಏಕಾಏಕಿ ಶೆಡ್ಗಳನ್ನು ತೆರವುಗೊಳಿಸಲಾಗಿದ್ದು, ಬರುವ ಸಂಬಳದಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಸಿಗುತ್ತಿದ್ದ ಕಾರಣ ಬಹುತೇಕ ಉತ್ತರ ಭಾರತೀಯರು ಹಾಗೂ ರಾಜ್ಯದ ಕೊಪ್ಪಳ, ಬಿಜಾಪುರ ಸೇರಿದಂತೆ ಅನೇಕ ಉತ್ತರ ಕರ್ನಾಟಕದ ಜನ ಇಲ್ಲಿ ವಾಸವಾಗಿದ್ದರು. ಆದರೆ ಬಿಬಿಎಂಪಿ ಎಡವಟ್ಟಿನಿಂದ ಸುರು ಕಳೆದುಕೊಂಡು ಮುಂದೇನು ಜನರು ಕಂಗಾಲಾಗಿದ್ದಾರೆ.
ಬಾಂಗ್ಲಾದೇಶಿಯರ ಶೆಡ್ಗಳ ತೆರವಿಗೆ ಬಂದ ಬಿಬಿಎಂಪಿ ಅಧಿಕಾರಿಗಳು ಭಾರತೀಯರ ಶೆಡ್ಗಳನ್ನು ತೆರವು ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಶೆಡ್ಗಳ ಪಕ್ಕದಲ್ಲೇ ಇರುವ ಪ್ರತಿಷ್ಠಿತ ಅಪಾರ್ಟ್ಮೆಂಟ್ ಬಿಲ್ಡರ್ ಒತ್ತಡಕ್ಕೆ ಬಿಬಿಎಂಪಿ ಮಣಿದಿದ್ದಾರಾ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಉದ್ಭವವಾಗಿದೆ.