ಯಾದಗಿರಿ: ಇಡಿಯಿಂದ ತಾತ್ಕಾಲಿಕ ರಿಲೀಫ್ ಸಿಕ್ಕ ಹಿನ್ನೆಲೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಲ ಗ್ರಾಮದ ದುರ್ಗಾ ದೇವಿಗೆ ಪತ್ರದ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
ದೇವಸ್ಥಾನ ಅರ್ಚಕ ಮಹಾದೇವಪ್ಪ ಅವರು ಬೆಂಗಳೂರಿಗೆ ಬಂದು ಡಿಕೆಶಿ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಅರ್ಚಕರ ಕೈಯಲ್ಲಿ ಡಿಕೆಶಿ ಕೃತಜ್ಞತಾ ಪತ್ರ ನೀಡಿದ್ದರು. ಈಗ ದೇವಸ್ಥಾನಕ್ಕೆ ಬರಲು ಆಗುವುದಿಲ್ಲ. ಮುಂದಿನ ವರ್ಷದ ದೇವಿಯ ಜಾತ್ರೆಗೆ ಖಂಡಿತ ಬರುತ್ತೆನೆಂದು ಅರ್ಚಕರಿಗೆ ಮಾತು ಕೊಟ್ಟಿದ್ದಾರಂತೆ. ಡಿಕೆಶಿ ಪತ್ರ ನಿನ್ನೆ ತಲುಪಿದ ಹಿನ್ನೆಲೆ ಪತ್ರದೊಂದಿಗೆ ದೇವಿಗೆ ನಿನ್ನೆ ತಡ ರಾತ್ರಿ ವಿಶೇಷ ಪೂಜೆಯನ್ನು ಸಲ್ಲಿಸಲಾಗಿದೆ. ಡಿಕೆಶಿ ಅಭಿಮಾನಿಗಳು ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಚನ್ನಾರೆಡ್ಡಿ ತುನ್ನೂರ ಪೂಜೆಯಲ್ಲಿ ಭಾಗಿಯಾಗಿ ಡಿಕೆ ಶಿವಕುಮಾರ್ ಅವರಿಗೆ ಒಳಿತಾಗಲೆಂದು ದೇವಿಯಲ್ಲಿ ಬೇಡಿಕೊಂಡಿದ್ದಾರೆ.
ಬಹಳ ವರ್ಷಗಳಿಂದಲೂ ಈ ದೇವಿಯ ಪರಮ ಭಕ್ತರಾಗಿರುವ ಡಿಕೆಶಿ, ಈ ಹಿಂದೆ ತಮಗೆ ಸಂಕಷ್ಟ ಎದುರಾದಾಗ ಈ ದೇವಸ್ಥಾನ ಅರ್ಚಕರಿಂದ ತಮ್ಮ ಮನೆಯಲ್ಲಿ ವಿಶೇಷ ಪೂಜೆ ಮಾಡಿಸಿದ್ದರು.