ಧಾರವಾಡ: ಕಳೆದ ವಾರವಷ್ಟೇ ಜಿಲ್ಲೆಯ ಯುವತಿಯೋರ್ವಳು ಭಾರತೀಯ ಸೈನ್ಯಕ್ಕೆ ಸೇರಿದ್ದು ಸುದ್ದಿಯಾಗಿತ್ತು. ಈಗ ಇದೇ ವಿದ್ಯಾಕಾಶಿ ಧಾರವಾಡದ ಬಾಲಕನೋರ್ವ ದುಬೈನಲ್ಲಿ ಅಬಾಕಸ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಬಂದಿದ್ದಾನೆ.
ಹೌದು, ನಗರದ ತಡಸಿನಕೊಪ್ಪದ ಗ್ಲೋಬಲ್ ಸ್ಕೂಲ್ ಆಫ್ ಎಕ್ಸಲೆನ್ಸಿ ಶಾಲೆಯ ನಾಲ್ಕನೇ ತರಗತಿ ಬಾಲಕ ವೇದ ರಾಯ್ಕರ್, ದುಬೈ ಚಾಂಪಿಯನ್ಶಿಪ್ ಗೆದ್ದು ಬಂದಿದ್ದಾನೆ. 16 ರಾಷ್ಟ್ರದ 2000 ಮಕ್ಕಳ ನಡುವೆ ಸ್ಪರ್ಧಿಸಿ ಪ್ರಶಸ್ತಿ ಜಯಿಸಿ ಶಾಲೆಗೆ ಹೆಮ್ಮೆ ತಂದಿದ್ದಾನೆ.
ಕಳೆದ ಮೂರು ವರ್ಷಗಳಿಂದ ನಗರದ ಶಿಕ್ಷಕಿ ತನುಜಾ ಬಳಿ ಅಬಾಕಸ್ ತರಬೇತಿ ಪಡೆಯಿತ್ತಿರುವ ವೇದ, ದುಬೈ ಚಾಂಪಿಯನ್ ಆಗುವ ಮೊದಲು ಕೂಡಾ ಹಲವು ಟ್ರೋಫಿ ಗೆದ್ದು ಬಂದಿದ್ದಾನೆ.
ಚೆನ್ನೈ, ಮುಂಬೈ ಹಾಗೂ ಬೆಂಗಳೂರಿನಲ್ಲಿ ನಡೆದಿರುವ ಅಬಾಕಸ್ ಸ್ಪರ್ಧೆಯಲ್ಲಿ ವೇದ ಚಾಂಪಿಯನ್ ಆಗಿದ್ದ. ಈ ಬಾರಿ ಅವನ ಜ್ಞಾನವನ್ನು ನೋಡಿದ ಪೋಷಕರು ದುಬೈಗೆ ಕಳಿಸಿದ್ದರು. ಕಳೆದ ತಿಂಗಳು ನಡೆದ ಈ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಚಾಂಪಿಯನ್ಶಿಪ್ ಟ್ರೋಫಿ ತಂದು ಕೊಡುವಲ್ಲಿ ಯಶಸ್ವಿಯಾಗಿದ್ದಾನೆ.