ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ, ಪಕ್ಷದ ಅಧ್ಯಕ್ಷರ ಎದುರು ಅಸಹಾಯಕರಾಗಿದ್ದಾರಾ ಎಂಬ ಪ್ರಶ್ನೆ ಮೂಡಿದ್ದು, ಬೆಂಗಳೂರು ಮೇಯರ್ ಆಯ್ಕೆ ಸಂಬಂಧ ಬಿಎಸ್ವೈ ಅವರು ಒಕ್ಕಲಿಗರ ನಿಯೋಗದ ಮುಂದೆ ಅಸಹಾಯಕರಾಗಿ ಮಾತನಾಡಿದ್ದಾರೆ.
ಮೇಯರ್ ಆಯ್ಕೆ ಸಂಬಂಧ ತಮ್ಮ ಸಮುದಾಯದ ನಾಯಕರಿಗೆ ಹುದ್ದೆ ನೀಡಬೇಕು ಎಂದು ಒಕ್ಕಲಿಗ ಸಂಘದ ನಾಯಕರು ಬಿಎಸ್ವೈ ಅವರಿಗೆ ನಿಯೋಗದೊಂದಿಗೆ ಮನವಿ ಸಲ್ಲಿಸಿದರು. ಈ ವೇಳೆ ಸಮುದಾಯದ ನಾಯಕರಿಗೆ ಯಾವುದೇ ಆಶ್ವಾಸನೆಯನ್ನು ಕೂಡ ನೀಡಿದ ಸಿಎಂ ಅವರು “ಅಧ್ಯಕ್ಷರನ್ನೇ ಕೇಳಿ, ಅವರದ್ದೇ ತೀರ್ಮಾನ” ಎಂದು ಹೇಳಿದ್ದಾರೆ.
“ನನಗೆ ಒಕ್ಕಲಿಗ, ಬ್ರಾಹ್ಮಣ ಏನೂ ಗೊತ್ತಿಲ್ಲ. ಎಲ್ಲರೂ ಸೇರಿಕೊಂಡು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಅದೇ ಅಂತಿಮ. ಈ ಬಗ್ಗೆ ರಾಜ್ಯದ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ. ನಮಗೆ ಬಂದ ಮನವಿಯನ್ನು ಅವರಿಗೆ ಕಳುಹಿಸಿಕೊಡುತ್ತೇವೆ. ನೀವು ಒಮ್ಮೆ ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಿ” ಎಂದು ಬಿಎಸ್ವೈ ಹೇಳಿದರು.
ಇದೇ ಸಂದರ್ಭದಲ್ಲಿ ಸಂಘದ ಮುಖಂಡರು ನಮ್ಮ ಭಾವನೆಗಳನ್ನು ನಿಮ್ಮ ಮುಂದೇ ಹೇಳುತ್ತಿದ್ದೇವೆ ಎಂದು ಮತ್ತೊಮ್ಮೆ ಒತ್ತಾಯ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಎಸ್ವೈ, ನಿಮ್ಮ ನೋವನ್ನು ಅರ್ಥ ಮಾಡಿಕೊಳ್ಳುವ ಹೃದಯ ಇದೆ. ಆದರೆ ನಾನು ಇಲ್ಲ ಎಂದು ಹೇಳುತ್ತಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಿ. ನೀವು ಭೇಟಿ ಮಾಡಿದ್ದ ಸಂಗತಿ ಹಾಗೂ ನಿಮ್ಮ ಭಾವನೆಗಳನ್ನು ಅಧ್ಯಕ್ಷರಿಗೆ ತಿಳಿಸುತ್ತೇನೆ. ನೀವು ಒಮ್ಮೆ ಅವರನ್ನು ಭೇಟಿ ಮಾಡಿ. ನನ್ನಿಂದ ಆಗುವ ಎಲ್ಲಾ ಪ್ರಯತ್ನವನ್ನು ಮಾಡುತ್ತೇನೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳಾಗಿದ್ದರೂ ಕೂಡ ಸಮುದಾಯದ ಮುಖಂಡರಿಗೆ ಭರವಸೆಯನ್ನು ನೀಡಲು ಕೂಡ ಸಾಧ್ಯವಾಗದೆ ಇರುವುದನ್ನು ಕಂಡ ಸಮುದಾಯದ ನಾಯಕರಲ್ಲಿ ಬಿಎಸ್ವೈ ಅಸಹಾಯಕರಾದರಾ ಎಂಬ ಅನುಮಾನ ಮೂಡಿತ್ತು. ಪಕ್ಷದ ಅಧ್ಯಕ್ಷರಾಗಿ ನಳೀನ್ ಕುಮಾರ್ ಕಟೀಲು ಆಯ್ಕೆಯಾದ ಬಳಿಕ ಬಿಎಸ್ವೈ ಅವರನ್ನು ಪಕ್ಷದಲ್ಲೇ ಸೈಡ್ ಲೈನ್ ಮಾಡಲಾಗುತ್ತಿದ್ದೀಯಾ ಎಂಬ ಅನುಮಾನ ಕಾರ್ಯಕರ್ತರನ್ನು ಕಾಡುತ್ತಿದೆ.