ಚಿತ್ರದುರ್ಗ: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಪರ ಒಕ್ಕಲಿಗರ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು, ಕಾನೂನು ಮೇಲ್ಮಟ್ಟದಲ್ಲಿದೆ, ಡಿಕೆಶಿ ಅವರಿಗಾಗಿ ಕಾನೂನನ್ನು ಕೆಳಗಿಳಿಸಲಾಗಲ್ಲ ಎಂದು ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇತಿಹಾಸ ತೆಗೆದು ನೋಡಲಿ, ರಾಜ್ಯದಲ್ಲಿ ಅನೇಕ ಇಡಿ, ಐಟಿ ದಾಳಿ ಆಗಿವೆ. ಅವರ ಸರ್ಕಾರ ಇದ್ದಾಗ ಅವರಿಗೊಂದು ನೀತಿ, ನಮ್ಮ ಸರ್ಕಾರ ಬಂದ ಮೇಲೆ ನಮಗೊಂದು ನೀತಿ ಇಲ್ಲ. ಕಾನೂನು ಎಲ್ಲರಿಗೂ ಒಂದೇ, ಇಲ್ಲಿ ಒಬ್ಬರಿಗೊಂದೊಂದು ನೀತಿಯಿಲ್ಲ. ಕಾನೂನು ಇಂದು ಎತ್ತರದ ಮಟ್ಟದಲ್ಲಿದೆ. ಡಿ.ಕೆ.ಶಿವಕುಮಾರ್ ಅವರಿಗಾಗಿ ಕಾನೂನು ಕೆಳಗಿಳಿಸಲಾಗಲ್ಲ. ಕಾನೂನು ರೀತಿ ಏನಾಗಬೇಕು ಅದಾಗುತ್ತಿದೆ. ಕಾನೂನು ಬಗ್ಗೆ ಮಾತಾಡಿ ನಾನು ದೊಡ್ಡಸ್ತಿಕೆ ತೋರಿಸಲ್ಲ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ:‘ಮೋದಿ, ಶಾ ಕಳ್ಳರು, ಡಿಕೆಶಿ ಕಣ್ಣೀರಿಗೆ ಕಾರಣವಾದವ್ರ ಮನೆಯಲ್ಲಿ ಕಣ್ಣೀರಿನ ಹೊಳೆ ಹರಿಯುತ್ತೆ’
ಹಾಗೆಯೇ ಡಿಕೆಶಿ ಅವರ ಬಂಧನದಿಂದ ಅವರ ಬೆಂಬಲಿಗರಿಗೆ ಕಾರ್ಯಕರ್ತರಿಗೆ ನೋವಾಗಿ ಹೋರಾಟ ಮಾಡುತ್ತಿರಬಹುದು. ಅದು ಅವರ ಇಷ್ಟ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಹೋರಾಟ ಮಾಡುವ ಹಕ್ಕಿದೆ. ಪ್ರತಿಭಟನೆ ಮಾಡುವುದು ತಪ್ಪು ಎಂದು ನಾನು ಹೇಳಲ್ಲ. ಹೋರಾಟದಿಂದಲೇ ಏನಾದರೂ ಸಾಧಿಸಬಹುದು. ಆದರೆ ಪ್ರತಿಭಟನಾಕಾರರಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ, ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಗೆ ನಷ್ಟ ಮಾಡದೆ ಹೋರಾಟ ಮಾಡಬೇಕು. ಕಲ್ಲು ತೂರಾಟ, ಬೆಂಕಿ ಹಚ್ಚುವುದು ಮಾಡಬೇಡಿ ಎಂದು ಕೋರಿಕೊಂಡಿದ್ದಾರೆ. ಇದನ್ನೂ ಓದಿ:ಪ್ರತಿಭಟನೆಗೆ ನನಗೆ ಆಹ್ವಾನ ನೀಡಿಲ್ಲ: ಎಚ್.ಡಿ ಕುಮಾರಸ್ವಾಮಿ
ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಡಿಕೆ ಶಿವಕುಮಾರ್ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಇಂದು ಸಿಲಿಕಾನ್ ಸಿಟಿಯಲ್ಲಿ ಒಕ್ಕಲಿಗರು ಹಾಗೂ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾಕಾರರು ಸಾಗುತ್ತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.