ಮಂಗಳೂರು: ಮನೆಯ ಆವರಣ ಗೋಡೆ ಕುಸಿದು ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಪಡೀಲ್ ಕೋಟೆಕಲ್ ಬಳಿಯ ಶಿವನಗರದಲ್ಲಿ ನಡೆದಿದೆ.
ಶಿವನಗರದ ರಾಮಚಂದ್ರ, ರಜನಿ ದಂಪತಿ ಮಕ್ಕಳಾದ ವೇದಾಂತ್(7) ಹಾಗೂ ವರ್ಷಿಣಿ (9) ಮೃತ ದುರ್ದೈವಿಗಳು. ಮಕ್ಕಳು ತಮ್ಮ ಮನೆಯ ಹೊರಗೆ ಕುಳಿತು ಓದುತ್ತಿದ್ದರು. ಈ ವೇಳೆ ಪಕ್ಕದ ಮನೆಯ 20 ಅಡಿ ಎತ್ತರದ ತಡೆಗೋಡೆ ಮಕ್ಕಳ ಮೇಲೆ ಕುಸಿದು ಬಿದ್ದ ಪರಿಣಾಮ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ.
ರಾಮಣ್ಣ ಕಣ್ಣೂರಿನ ಸೆರಾಮಿಕ್ ಫ್ಯಾಕ್ಟರಿಯೊಂದರಲ್ಲಿ 15 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದು, ಇತ್ತೀಚೆಗೆ ಪಡೀಲ್ಗೆ ಸ್ಥಳಾಂತರಗೊಂಡಿದ್ದರು. ವರ್ಷಿಣಿ ಕಪಿತಾನಿಯ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಹಾಗೂ ವೇದಾಂತ್ ಎರಡನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಸೋಮವಾರ ಪರೀಕ್ಷೆ ಇದ್ದಿದ್ದರಿಂದ ಮನೆಯ ಆವರಣ ಗೋಡೆಯ ಸಮೀಪ ಕುಳಿತು ಓದುತ್ತಿದ್ದರು. ಆದರೆ ರಾತ್ರಿ 7:50ರ ಸುಮಾರಿಗೆ ಮನೆ ಗೋಡೆ ಏಕಾಏಕಿ ಕುಸಿದು ಬಿದ್ದು, ಮಕ್ಕಳಿಬ್ಬರೂ ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ. ಆವರಣ ಗೋಡೆಯ ಅವಶೇಷಗಳಡಿ ಸಿಲುಕಿದ್ದ ಮಕ್ಕಳನ್ನು ತಕ್ಷಣ ಕಣ್ಣೂರಿನ ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲಾಗಲೇ ಮಕ್ಕಳು ಮೃತಪಟ್ಟಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಈ ಘಟನೆಗೆ ಕಾರಣಿಕರ್ತರಾದ ಪಿಡಬ್ಲ್ಯುಡಿ ಇಂಜಿನಿಯರ್ ಹಾಗೂ ಮನೆಗೆ ಸಂಬಂಧಿಸಿದವರ ಮೇಲೆ ಕ್ರಮಕೈಗೊಳ್ಳಬೇಕು. ಜೊತೆಗೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಮಂಗಳೂರು ಪೊಲೀಸ್ ಕಮಿಷನರ್ ಪಿ.ಎಸ್ ಹರ್ಷ ಸೂಚನೆ ನೀಡಿದ್ದಾರೆ.
ಈ ಸಂಬಂಧ ಮಂಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.