ನವದೆಹಲಿ: ಬುಲಂದ್ಶಹರ್ ನಲ್ಲಿಯ ಸೋದರನಿಗೆ ರಾಖಿ ಕಟ್ಟಿ ತೆರಳುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ.
ಮೂರು ಮಕ್ಕಳ ತಾಯಿಯಾಗಿರುವ ಮಹಿಳೆಯನ್ನು ಆರೋಪಿ ಕಾರಿನಲ್ಲಿ ಲಿಫ್ಟ್ ನೀಡುವುದಾಗಿ ಕರೆದುಕೊಂಡು ಹೋಗಿ ಆರು ಗಂಟೆಗಳ ಕಾಲ ಅತ್ಯಾಚಾರ ನಡೆಸಿ, ಬೆಳಗಿನ ಜಾವ 4 ಗಂಟೆಗೆ ಪರಿ ಚೌಕನಲ್ಲಿ ಮಹಿಳೆಯನ್ನು ಇಳಿಸಿ ಪರಾರಿಯಾಗಿದ್ದಾನೆ.
ಮಹಿಳೆ ಗ್ರೇಟರ್ ನೊಯ್ಡಾದ ಸೆಕ್ಟರ್-144ರಲ್ಲಿ ಬಾಡಿಗೆ ಮನೆಯಲ್ಲಿ ತನ್ನ ಮಕ್ಕಳೊಂದಿಗೆ ವಾಸವಾಗಿದ್ದರು. ರಕ್ಷಾ ಬಂಧನದಂದು ಸೋದರನಿಗೆ ರಾಖಿ ಕಟ್ಟಲು ಬುಲಂದಶಹರ್ ನಲ್ಲಿಯ ತವರು ಮನೆಗೆ ತೆರಳಿದ್ದರು. ರಾಖಿ ಕಟ್ಟಿ ಹಿಂದಿರುಗುತ್ತಿದ್ದ ವೇಳೆ ಬಸ್ ಸಿಕ್ಕಿರಲಿಲ್ಲ. ಸೆಕ್ಟರ್ ಬೀಟಾ-1ರ ನಿವಾಸಿಯಾಗಿರುವ ಸ್ನೇಹಿತೆಯ ಗೆಳೆಯನ ಸೋದರನಿಗೆ ಕರೆ ಮಾಡಿ ಡ್ರಾಪ್ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಕಾರಿನಲ್ಲಿ ಬಂದ ಸರ್ದಾರ್ ಅಲಿಯಾಸ್ ಬಲ್ಲಿ ಮಹಿಳೆಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ.
ಮಹಿಳೆ ಕಾರಿನಲ್ಲಿ ಕುಳಿತ ತಕ್ಷಣವೇ ನಶೆ ಪದಾರ್ಥ ಮಿಶ್ರಣದ ಪಾನೀಯವನ್ನು ಕುಡಿಸಿದ್ದಾನೆ. ಹೀಗೆ ಕಾರಿನಲ್ಲಿ ಮಹಿಳೆಯನ್ನು ಆರು ಗಂಟೆಗಳ ಕಾಲ ತಿರುಗಾಡಿಸಿ ಅತ್ಯಾಚಾರ ಎಸಗಿದ್ದಾನೆ. ಗಾಜಿಯಾಬಾದ್ ಬಳಿ ಮಹಿಳೆಯ ಡೆಬಿಟ್ ಕಾರ್ಡ್ ಬಳಸಿ 1 ಸಾವಿರ ರೂ. ಹಣ ಡ್ರಾ ಮಾಡಿಕೊಂಡು, ಬೆಳಗಿನ ಜಾವ 4 ಗಂಟೆಗೆ ಪರಿ ಚೌಕ್ ಬಳಿ ಸಂತ್ರಸ್ತೆಯನ್ನು ಬಿಟ್ಟು ಎಸ್ಕೇಪ್ ಆಗಿದ್ದಾನೆ ಎಂದು ಬೀಟಾ-2 ಕೊತವಾಲಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಪತಿ ಓರ್ವ ರೌಡಿಶೀಟರ್ ಆಗಿದ್ದನು. ಮಹಿಳೆ ಸಹ ಯುವಕನ ಕೊಲೆ ಪ್ರಕರಣದಲ್ಲಿ ಎರಡೂವರೆ ವರ್ಷ ಜೈಲಿನಲ್ಲಿದ್ದಳು. ಸದ್ಯ ಜಾಮೀನಿನ ಮೇಲೆ ಹೊರ ಬಂದ ವೇಳೆ ಈ ಘಟನೆ ನಡೆದಿದೆ ಎಂದು ಎಸ್ಪಿ ದೇಹತ್ ರಣ್ವಿಜಯ್ ಹೇಳಿದ್ದಾರೆ.