ಬೆಂಗಳೂರು: ಯಾವುದೇ ಕಾರಣಕ್ಕೂ ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ವಾಪಸ್ ಪಡೆಯಲ್ಲ. ಅಧಿವೇಶನಕ್ಕೂ ಹೋಗಲ್ಲ ಎಂದಿದ್ದ ಶಾಸಕ ರಾಮಲಿಂಗಾ ರೆಡ್ಡಿ ಹಾಗೂ ರೋಷನ್ ಬೇಗ್ ಉಲ್ಟಾ ಹೊಡೆದ್ರಾ ಅನ್ನೋ ಅನುಮಾನ ಎದ್ದಿದೆ.
ಯಾಕಂದರೆ ಇಬ್ಬರು ಬಂಡಾಯಗಾರರು ವಿಚಿತ್ರ ಷರತ್ತಿನೊಂದಿಗೆ ಯೂ ಟರ್ನ್ ಹೊಡೆದಿದ್ದಾರೆ ಎಂದು ಹೇಳಲಾಗುತ್ತಿದ್ದು, ಇಬ್ಬರು ಶಾಸಕರು ಮೈತ್ರಿ ಪಾಳಯಕ್ಕೆ ವಾಪಾಸ್ ಆಗಲಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಯಾವ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯಲ್ಲ. ನನ್ನ ದಾರಿ ನನಗೆ ಆದರೆ ವಿಶ್ವಾಸ ಮತ ಸಾಬೀತು ಹಾಗೂ ಫೈನಾನ್ಸ್ ಬಿಲ್ ಸಂದರ್ಭದಲ್ಲಿ ಸದನಕ್ಕೆ ಬಂದು ಬೆಂಬಲ ಕೊಡುತ್ತೇನೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಇತ್ತ ಈಗಾಗಲೇ ಪಕ್ಷದಿಂದ ಉಚ್ಛಾಟನೆಗೊಂಡು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರೋಷನ್ ಬೇಗ್ ಕೂಡ, ನನ್ನ ದಾರಿ ನನಗೆ ನಿಮ್ಮ ಹಂಗಲ್ಲಿ ನಾನಿರಲ್ಲ. ಆದರೆ ಅಧಿವೇಶನದಲ್ಲಿ ವಿಶ್ವಾಸಮತ ಸಾಬೀತಿಗೆ ಮುಂದಾದ್ರೆ ನಾನು ಸದನಕ್ಕೆ ಬಂದು ಬೆಂಬಲ ಕೊಡುತ್ತೇನೆ ಎಂದು ಹೇಳಿದ್ದಾರೆ.
ಈ ಮೂಲಕ ಇಬ್ಬರು ಬಂಡಾಯ ಶಾಸಕರ ಬೆಂಬಲವನ್ನು ದೋಸ್ತಿ ಸರ್ಕಾರ ಗಿಟ್ಟಿಸಿಕೊಂಡಿದೆ. ಇತ್ತ ಸತತ ಹಲವು ಗಂಟೆಗಳ ಕಾಲ ಸಚಿವ ಡಿಕೆಶಿ, ಡಿಸಿಎಂ ಪರಮೇಶ್ವರ್ ಹಾಗೂ ಇತರ ನಾಯಕರೊಂದಿಗಿನ ಸುದೀರ್ಘ ಚರ್ಚೆಯ ಬಳಿಕ ಎಂಟಿಬಿ ನಾಗರಾಜ್ ಕೂಡ ರಾಜೀನಾಮೆ ವಾಪಸ್ ಗೆ ಸಮಯ ಕೇಳುವ ಮೂಲಕ ತನ್ನ ರಾಜೀನಾಮೆ ವಾಪಸ್ ತೆಗೆದುಕೊಳ್ಳುವುದು ಬಹುತೇಕ ಖಚಿತವಾಗಿದೆ.