ಬೆಂಗಳೂರು: ದೋಸ್ತಿ ಸರ್ಕಾರದ ವಿಕೆಟ್ ಇನ್ನೂ ಪತನವಾಗುತ್ತಾ ಎಂಬ ಅನುಮಾನವೊಂದು ಇದೀಗ ಮೂಡಿದೆ. ಯಾಕಂದ್ರೆ ಮೂರು ಪಕ್ಷಗಳ ಶಾಸಕರು ರೆಸಾರ್ಟ್ ವಾಸ್ತವ್ಯದ ಮೊರೆ ಹೋಗಿದ್ದಾರೆ. ಈ ಮಧ್ಯೆ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಅವರ ನಡೆ ತೀವ್ರ ಕುತೂಹಲ ಹುಟ್ಟಿಸಿದೆ.
ಹೌದು. ರಾಜ್ಯ ರಾಜಕಾರಣ ರೆಸಾರ್ಟ್ ಗೆ ಶಿಫ್ಟ್ ಆಗಿದೆ. ಸತತ 8ನೇ ದಿನಗಳಿಂದ ಆಡಳಿತಯಂತ್ರ ಸಂಪೂರ್ಣ ಕುಸಿದುಬಿದ್ದಿದೆ. ತಮ್ಮ ನೂರಕ್ಕೂ ಹೆಚ್ಚು ಶಾಸಕರನ್ನು ಒಂದೇ ಕಡೆ ಇರಿಸಿಕೊಳ್ಳಲು ಬಿಜೆಪಿಯವರಿಗೆ ಸರಿಯಾದ ಜಾಗ ಸಿಕ್ಕಿಲ್ಲ. ದೇವನಹಳ್ಳಿ ಸಮೀಪದ ರಮಾಡಾ ರೆಸಾರ್ಟ್ ನಲ್ಲಿ 80 ಶಾಸಕರನ್ನು, ಸಾಯಿ ಲೀಲಾ ರೆಸಾರ್ಟ್ ನಲ್ಲಿ 22 ಶಾಸಕರನ್ನು ಬಿಜೆಪಿ ನಾಯಕರು ಬಿಗಿ ಭದ್ರತೆ ನಡುವೆ ಇರಿಸಿದ್ದಾರೆ.
ಕಾಂಗ್ರೆಸ್ ನಾಯಕರಿಗೆ ರೆಸಾರ್ಟ್ ಸಿಕ್ಕಿಲ್ಲ. ಹೀಗಾಗಿ ಗೊರಗುಂಟೆಪಾಳ್ಯದ ತಾಜ್ ವಿವಾಂತ ಹೋಟೆಲ್ನಲ್ಲಿ ತನ್ನ ಶಾಸಕರನ್ನು ಕಾಂಗ್ರೆಸ್ ಇರಿಸಿದೆ. ಆದರೆ ಶುಕ್ರವಾರ ರಾತ್ರಿ ತಾಜ್ ವಿವಾಂತದಿಂದ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ನಿರ್ಗಮಿಸಿದ್ದು, ಅವರ ಈ ನಡೆ ಕುತೂಹಲ ಕೆರಳಿಸಿದೆ.
ಜೆಡಿಎಸ್ ಶಾಸಕರು ಕಳೆದ ನಾಲ್ಕು ದಿನಗಳಿಂದ ದೇವನಹಳ್ಳಿ ಸಮೀಪದ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ನಲ್ಲಿ ಬೀಡುಬಿಟ್ಟಿದ್ದಾರೆ. ಸೋಮವಾರ ಸದನ ಆರಂಭವಾಗುವವರೆಗೆ ಎಲ್ಲರನ್ನು ರೆಸಾರ್ಟ್ ಗಳಲ್ಲಿ ಇರಿಸಿಕೊಳ್ಳಲಾಗುತ್ತದೆ. ಅಲ್ಲದೆ ಎಲ್ಲಾ ಕಡೆ ಟೈಟ್ ಸೆಕ್ಯೂರಿಟಿ ಕೈಗೊಳ್ಳಲಾಗಿದೆ.