ಬೆಂಗಳೂರು: ರಾಜೀನಾಮೆ ನೀಡಿದ ಬಳಿಕ ಚಿಕ್ಕಬಳ್ಳಾಪುರ ಶಾಸಕ ಕೆ.ಸುಧಾಕರ್ ಅವರಿಗೆ ಕಾಂಗ್ರೆಸ್ ನಾಯಕರು ದಿಗ್ಭಂದನ ಹಾದ್ದಾರೆ. ವಿಧಾನಸೌಧದಲ್ಲಿ ಪರಿಸ್ಥಿತಿ ಗಲಾಟೆಯಾಗಿ ಬದಲಾಗುತ್ತಿದ್ದಂತೆ ರಾಜ್ಯಪಾಲ ವಜೂಬಾಯಿ ವಾಲಾ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರಿಗೆ ಶಾಸಕರಿಗೆ ರಕ್ಷಣೆ ನೀಡಿ ಕರೆತರಬೇಕೆಂದು ಸೂಚಿಸಿದ್ದಾರೆ.
ರಾಜ್ಯಪಾಲರ ಸೂಚನೆ ಮೇರೆಗೆ ಅಲೋಕ್ ಕುಮಾರ್ ಅವರು 1 ಸಾವಿರ ಪೊಲೀಸರನ್ನು ವಿಧಾನಸೌಧಕ್ಕೆ ನಿಯೋಜನೆ ಮಾಡಿದ್ದಾರೆ. ಸ್ವತಃ ಅಲೋಕ್ ಕುಮಾರ್ ಅವರೇ ವಿಧಾನಸೌಧಕ್ಕೆ ಆಗಮಿಸಿದರು. ಇತ್ತ ಬಿಜೆಪಿ ಶಾಸಕರು ಸಹ ವಿಧಾನಸೌಧ ಕೊಠಡಿಗೆ ಆಗಮಿಸಿ ಸುಧಾಕರ್ ಅವರನ್ನು ರಕ್ಷಿಸಿ, ರಕ್ಷಿಸಿ ಎಂದು ಘೋಷಣೆ ಕೂಗುತ್ತಿದ್ದಾರೆ.
ವಿಧಾನಸೌಧ ಗಲಾಟೆ ಸೌಧವಾಗಿ ಬದಲಾಗುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಎಲ್ಲ ಪ್ರವೇಶ ದ್ವಾರಗಳನ್ನು ಬಂದ್ ಮಾಡಿದ್ದಾರೆ. ಕೆ.ಜೆ.ಜಾರ್ಜ್ ಅವರ ಕೊಠಡಿಯಲ್ಲಿ ಸುಧಾಕರ್ ಜೊತೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಎಂ.ಬಿ.ಪಾಟೀಲ್ ಮತ್ತು ಪ್ರಿಯಾಂಕ್ ಖರ್ಗೆ ಮಾತುಕತೆ ನಡೆಸುತ್ತಿದ್ದಾರೆ.
ವಿಧಾನಸೌಧಕ್ಕೆ ಆಗಮಿಸಿದ ಅಲೋಕ್ ಕುಮಾರ್ ಬಿಗಿ ಪೊಲೀಸ್ ಭದ್ರತೆಯಲ್ಲಿ ಶಾಸಕ ಸುಧಾಕರ್ ಅವರನ್ನು ಕೆ.ಜೆ.ಜಾರ್ಜ್ ಕೊಠಡಿಯಿಂದ ಹೊರ ಕರೆದುಕೊಂಡು ಬಂದರು. ಸುಧಾಕರ್ ಅವರನ್ನು ನೇರವಾಗಿ ರಾಜಭವನಕ್ಕೆ ಕರೆದುಕೊಂಡು ಹೋದರು.