ಬೆಂಗಳೂರು: ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಂದ ಇಂದೇ ಮೈತ್ರಿ ಸರ್ಕಾರದ ಕ್ಲೈಮ್ಯಾಕ್ಸ್ ಆಗಿಬಿಡುತ್ತಾ ಎಂಬ ಪ್ರಶ್ನೆ ಕಾಡುತ್ತಿದೆ.
ಯಾಕಂದ್ರೆ ಈಗಾಗಲೇ 15 ಮಂದಿ ರಾಜೀನಾಮೆ ನೀಡಿದ್ದಾರೆ. ಆದರೆ ಸೋಮವಾರ ಸ್ಪೀಕರ್ ಇರಲಿಲ್ಲ. ಹೀಗಾಗಿ ಇಂದು ಅವರು ಶಾಸಕರ ರಾಜೀನಾಮೆ ಅಂಗೀಕಾರ ಪ್ರಕ್ರಿಯೆಯನ್ನು ಮುಗಿಸ್ತಾರಾ ಅಥವಾ ವಿಳಂಬ ಮಾಡ್ತಾರಾ ಎಂಬ ಕುತೂಹಲ ರಾಜ್ಯದ ಜನರಲ್ಲಿ ಮೂಡಿಸಿದೆ.
ಸ್ಪೀಕರ್ ಮುಂದಿರುವ ಅವಕಾಶ, ನಿಯಮ:
ರಾಜೀನಾಮೆ ಕೊಟ್ಟ ಶಾಸಕರನ್ನು ಸ್ಪೀಕರ್ ವಿಚಾರಣೆಗೆ ಕರೀತಾರಾ, ಪ್ರತ್ಯೇಕ ವಿಚಾರಣೆ ಮಾಡುತ್ತಾರೆಯೋ ಅಥವಾ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಅವಕಾಶವೂ ಅವರ ಮುಂದಿದೆಯಾ ಎನ್ನುವ ಪ್ರಶ್ನೆ ಎದ್ದಿದೆ.
ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ವಿರುದ್ಧ ಪಕ್ಷಾಂತರ ನಿಷೇಧ ಕಾಯಿದೆ ಅಡಿ ಸಿದ್ದರಾಮಯ್ಯ ದೂರು ಕೊಟ್ಟಿದ್ದರು. ಆದರೆ ಈವರೆಗೂ ಈ ದೂರಿನ ಬಗ್ಗೆ ಸ್ಪೀಕರ್ ಅವರು ಸೂಕ್ತ ಕ್ರಮ ಕೈಗೊಂಡಿಲ್ಲ. ಈ ದೂರನ್ನು ಈಗ ವಿಚಾರಣೆಗೆ ತೆಗೆದುಕೊಂಡು ರಾಜೀನಾಮೆ ಪ್ರಕ್ರಿಯೆ ವಿಳಂಬ ಮಾಡಬಹುದಾದ ಸಾಧ್ಯತೆಗಳಿವೆ.
ಕಾಂಗ್ರೆಸ್ನ ಈಗಿನ ಹೊಸ ದೂರುಗಳ ವಿಚಾರಣೆಯ ನೆಪ ಕೊಡುವ ಮೂಲಕ ಶಾಸಕರನ್ನು ಒಬ್ಬೊಬ್ಬರಾಗಿ ಕರೆಸಿ ರಾಜೀನಾಮೆ ನೀಡಲು ನಿಜ ಕಾರಣದ ಸ್ಪಷ್ಟನೆ ಪಡೆಯ ಸಾಧ್ಯತೆ ಇದೆ. ಅಲ್ಲದೆ ಯಾವುದೇ ಆಮಿಷಕ್ಕೆ ಒಳಗಾಗಿಲ್ಲ ಅಂತ ಖಾತರಿ ಪಡಿಸಿಕೊಳ್ಳುವ ನೆಪ ಹಾಗೂ ಶಾಸಕರ ಕ್ಷೇತ್ರಗಳಿಂದ ಸಂಘಟನೆಗಳು ಹಾಗೂ ಸಾರ್ವಜನಿಕರನ್ನು ಕರೆಸಿ ಅಭಿಪ್ರಾಯ ಸಂಗ್ರಹಿಸುವ ನೆಪವನ್ನೂ ನೀಡಬಹುದು. ಹೀಗೆ ರಾಜೀನಾಮೆ ಅಂಗಿಕಾರ ವಿಳಂಬ ಮೂಲಕ ಅತೃಪ್ತ ಶಾಸಕರ ಮನವೊಲಿಸಲು ದೋಸ್ತಿಗಳಿಗೆ ಸ್ಪೀಕರ್ ಸಮಯ ಕೊಡಬಹುದಾದ ಸಾಧ್ಯತೆಗಳಿವೆ.
ವಿಳಂಬ ಧೋರಣೆ ಅನುಸರಿಸಿದರೂ ರಾಜೀನಾಮೆಯು ನಿಯಮ ಬದ್ಧವಾಗಿದ್ದರೆ ಅಂಗೀಕರಿಸ್ತಾರಾ ಅಥವಾ ಇಲ್ಲವೆ ಎಂಬುದನ್ನು ಕಾದುನೋಡಬೇಕು. ಒಟ್ಟಿನಲ್ಲಿ ಇಂದಿನ ಸ್ಪೀಕರ್ ನಡೆ ಭಾರೀ ಕುತೂಹಲ ಹುಟ್ಟಿಸಿದೆ.
ರಾಜೀನಾಮೆ ಕೊಟ್ಟ ಜೆಡಿಎಸ್ ಶಾಸಕರು:
* ಎಚ್ ವಿಶ್ವನಾಥ್- ಹುಣಸೂರು
* ಗೋಪಾಲಯ್ಯ- ಮಾಹಾಲಕ್ಷ್ಮಿ ಲೇ ಔಟ್
* ನಾರಾಯಣ ಗೌಡ- ಕೆ. ಆರ್ ಪೇಟೆ
ರಾಜೀನಾಮೆ ಕೊಟ್ಟ ಕೈ ಶಾಸಕರು:
* ರಾಮಲಿಂಗಾ ರೆಡ್ಡಿ- ಬಿಟಿಎಂ ಲೇ ಔಟ್
* ರಮೇಶ್ ಜಾರಕಿಹೊಳಿ- ಗೋಕಾಕ್
* ಎಸ್.ಟಿ ಸೋಮಶೇಖರ್- ಯಶವಂತಪುರ
* ಪ್ರತಾಪ್ ಗೌಡ ಪಾಟೀಲ್- ಮಸ್ಕಿ
* ಬಿ.ಸಿ ಪಾಟೀಲ್- ಹಿರೇಕೆರೂರು
* ಮಹೇಶ್ ಕುಮಟಳ್ಳಿ- ಅಥಣಿ
* ಭೈರತಿ ಬಸವರಾಜ್- ಕೆ.ಆರ್ ಪುರಂ
* ಶಿವರಾಂ ಹೆಬ್ಬಾರ್- ಯಲ್ಲಾಪುರ
* ಮುನಿರತ್ನ- ರಾಜರಾಜೇಶ್ವರಿ ನಗರ
* ರೋಷನ್ ಬೇಗ್- ಶಿವಾಜಿನಗರ
ಪಕ್ಷೇತರ ಶಾಸಕರು:
ಎಚ್ ನಾಗೇಶ್
ಆರ್ ಶಂಕರ್