– ಮೊಬೈಲ್ ಮೇಲೂ ಕಣ್ಣು
– ಪತ್ನಿಯ ಮೇಲೆ ಕಣ್ಣಿಡಲು ಜನ ನೇಮಿಸಿದ್ದ
ಬೆಂಗಳೂರು: ಪತ್ನಿ ಮೇಲಿದ್ದ ಅನುಮಾನದಿಂದ ಟೆಕ್ಕಿಯೊಬ್ಬನು ಮನೆಯಲ್ಲಿ ಹಾಗೂ ಪತ್ನಿಯ ಮೊಬೈಲ್ನಲ್ಲಿ ಸ್ಪೈಕ್ಯಾಮೆರಾವನ್ನು ಅಳವಡಿಸಿದ್ದನು. ಈ ವಿಷಯ ತಿಳಿಯುತ್ತಿದ್ದಂತೆ ಪತ್ನಿ ಪತಿಗೆ ಬ್ಯಾಟ್ನಿಂದ ಭರ್ಜರಿಯಾಗಿ ಗೂಸ ನೀಡಿದ್ದಾಳೆ. ಪರಿಣಾಮ ಪತಿಯ ತಲೆಗೆ ಗಂಭೀರ ಗಾಯಗಳಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ದಂಪತಿಯು ರಾಜಧಾನಿಯ ಜಯನಗರದಲ್ಲಿ ವಾಸವಾಗಿದ್ದರು. ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ 44 ವರ್ಷದ ಸುದರ್ಶನ್ ಮೇಲೆ ಪತ್ನಿ ವಿನಯ (ದಂಪತಿಯ ಹೆಸರು ಬದಲಾಯಿಸಲಾಗಿದೆ) ಹಲ್ಲೆ ಮಾಡಿದ್ದಾಳೆ. ಪತ್ನಿಯ ಮೇಲಿದ್ದ ಅನುಮಾನದಿಂದ ಆಕೆಯ ಮೇಲೆ ಸದಾ ಕಣ್ಣಿಡಲು ಮನೆಯಲ್ಲಿ ಬರೋಬ್ಬರಿ 22 ಸ್ಪೈ ಕ್ಯಾಮೆರಾಗಳನ್ನು ಟೆಕ್ಕಿ ಅಳವಡಿಸಿದ್ದನು. ಅಲ್ಲದೆ ಪತ್ನಿಯ ಫೋನ್ನಲ್ಲಿ ಸ್ಪೈವೇರ್ ಪ್ರೋಗ್ರಾಮ್ನನ್ನು ಹಾಕಿ ಆಕೆಯ ಮೊಬೈಲ್ ಮೇಲೆಯೂ ಕಣ್ಣಿಟ್ಟಿದ್ದನು. ಪತಿಯ ಈ ಅತಿಯಾದ ಅನುಮಾನ ಬುದ್ಧಿಯಿಂದ ಬೇಸತ್ತಿದ್ದ ಪತ್ನಿ ಅತನ ತಲೆಗೆ ಬ್ಯಾಟ್ ನಿಂದು ಹೊಡೆದು ತನ್ನ ಸಿಟ್ಟನ್ನು ತೀರಿಸಿಕೊಂಡಿದ್ದಾಳೆ.
2007ರಲ್ಲಿ ಸುದರ್ಶನ್ ವಿನಯಾಳನ್ನು ಇಷ್ಟಪಟ್ಟಿದ್ದನು. ಆದರೆ ಆಗಿನ್ನೂ ವಿನಯ ಓದುತ್ತಿದ್ದಳು ಎಂಬ ಕಾರಣಕ್ಕೆ ಅವರ ಮನೆಯವರು ಮದುವೆಗೆ ಒಪ್ಪಿಗೆ ನೀಡಿರಲಿಲ್ಲ. ಅವರಿಬ್ಬರ ನಡುವೆ 11 ವರ್ಷಗಳ ವಯಸ್ಸಿನ ಅಂತರವಿದ್ದರೂ, ಮೂರು ವರ್ಷ ಕಾದ ಸುದರ್ಶನ್ 2010ರಲ್ಲಿ ವಿನಯಾಳನ್ನು ಮದುವೆ ಆಗಿದ್ದನು. ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ. ಅವರ ಜೀವನ ಸರಿಯಾಗಿಯೇ ಸಾಗುತ್ತಿತ್ತು. ಆದರೆ ಕೆಲ ವರ್ಷಗಳಿಂದ ಸುದರ್ಶನ್ ಪತ್ನಿ ಮೇಲೆ ಅನುಮಾನ ಪಡಲು ಶುರುಮಾಡಿದ್ದಾನೆ. ಆದ್ದರಿಂದ ಮನೆಯಲ್ಲಿ ಸ್ಪೈ ಕ್ಯಾಮೆರಾಗಳನ್ನು ಅಳವಡಿಸಿದ್ದನು. ಜೊತೆಗೆ ಪತ್ನಿ ಹೊರಗಡೆ ಹೋದಾಗ ಆಕೆಯ ಮೇಲೆ ಕಣ್ಣಿಡಲು ಜನರನ್ನೂ ಕೂಡ ಛೂ ಬಿಡುತ್ತಿದ್ದನು.
ಈ ಅನುಮಾನದ ಬುದ್ಧಿಯಿಂದಲೇ ದಂಪತಿ ಮಧ್ಯೆ ಹಲವಾರು ಬಾರಿ ಜಗಳ ನಡೆದಿದೆ. ಆದರೂ ಕೂಡ ಟೆಕ್ಕಿ ತನ್ನ ಅನುಮಾನದ ಬುದ್ಧಿಯನ್ನು ಬಿಟ್ಟಿರಲಿಲ್ಲ. ಕೆಲವು ದಿನಗಳ ಹಿಂದೆ ತಾನು ಬದಲಾಗಿದ್ದೇನೆ ಎಂದು ಹೇಳಿ ಪತ್ನಿಗೆ ಪ್ರೀತಿಯಿಂದ ಮೊಬೈಲ್ವೊಂದನ್ನು ಪತಿ ಗಿಫ್ಟ್ ಮಾಡಿದ್ದನು. ಆದರೆ ಅದರಲ್ಲೂ ಕೂಡ ಸ್ಪೈವೇರ್ ಪ್ರೋಗ್ರಾಮ್ ಅಳವಡಿಸಿ ಪತ್ನಿಯ ಕರೆ, ಮೆಸೆಜ್ಗಳ ಮೇಲೆ ಕಣ್ಣಿಟ್ಟಿದ್ದನು.
ಏಪ್ರಿಲ್ನಲ್ಲಿ ಪತ್ನಿ ಸಂಬಂಧಿ ಎಂದು ತಿಳಿಯದೆ ಅವರಿಬ್ಬರು ಜೊತೆಗಿರುವ ಫೋಟೋವೊಂದನ್ನು ಹಿಡಿದು ಟೆಕ್ಕಿ ಅನುಮಾನ ವ್ಯಕ್ತಪಡಿಸಿದ್ದನು. ಆಗ ಪತಿಯೂ ಸರಿಯಾಗಿದ್ದಾನೆ ಎಂದು ನಂಬಿದ್ದ ಪತ್ನಿಗೆ ನಿಜಾಂಶ ತಿಳಿದಿದೆ. ಇದರಿಂದ ಕೋಪಗೊಂಡ ಪತ್ನಿ ಮನಗ ಕ್ರಿಕೆಟ್ ಬ್ಯಾಟಿಂದ ಪತಿಯ ತಲೆಗೆ ಬಾರಿಸಿದ್ದಾಳೆ.
ಪತ್ನಿ ಪತಿಗೆ ಹೊಡೆದ ಪರಿಣಾಮ ಆತನ ತಲೆಗೆ ಗಂಭೀರ ಗಾಯಗಳಾಗಿ ಹೊಲಿಗೆ ಹಾಕಲಾಗಿದೆ. ಪತ್ನಿ ತನ್ನ ಮೇಲೆ ಹಲ್ಲೆ ಮಾಡಿದ್ದಾಳೆ ಎಂದು ಪತಿರಾಯ ಆಕೆಯ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಅಲ್ಲದೆ ತನ್ನ ಮುಖದ ಆಕಾರವನ್ನೇ ಬದಲಿಸಿದ್ದಾಳೆ ಎಂದು ದೂರಿ ಟೆಕ್ಕಿ ವಿಚ್ಛೇದನಕ್ಕೆ ಅರ್ಜಿಯನ್ನೂ ಕೂಡ ಸಲ್ಲಿಸಿದ್ದಾನೆ. ಈ ಸಂಬಂಧ ದಂಪತಿಯನ್ನು ಒಂದು ಮಾಡಲು ವಾರಾನು ಗಟ್ಟಲೆ ಕೌನ್ಸ್ಲಿಂಗ್ ಮಾಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ದಂಪತಿ ಮಾತ್ರ ಇಬ್ಬರೂ ಮತ್ತೆ ಒಂದಾಗಲು ಒಪ್ಪುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.