ದಾವಣಗೆರೆ: ರಸ್ತೆಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಕವರ್ ಕಚ್ಚುತ್ತಿದ್ದಂತೆ ಭೀಕರ ಸ್ಫೋಟಗೊಂದು ಸಾಕುನಾಯಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ (Channagiri) ತಾಲೂಕಿನ ನಲ್ಕುದರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಅರೆಕೇರೆ ರುದ್ರೇಶ್ ಎನ್ನುವವರಿಗೆ ಸೇರಿದ ನಾಯಿ ಇದಾಗಿದೆ. ಇದನ್ನೂ ಓದಿ: ಭೀಮಾತೀರದಲ್ಲಿ 6 ಜನರ ಹತ್ಯೆ ಪ್ರಕರಣ – ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು
ಘಟನೆ ನಡೆದ ದಿನ ರುದ್ರೇಶ್ ಅವರು ಜಮೀನಿನಲ್ಲಿ ದನ ಮೇಯಿಸಲು ಹೋಗುತ್ತಿದ್ದಾಗ ನಾಯಿ ಸಹ ಅವರ ಜೊತೆಗೆ ಹೋಗುತ್ತಿತ್ತು. ಈ ವೇಳೆ ರಸ್ತೆ ಬದಿ ಬಿದ್ದಿದ್ದ ಪ್ಲಾಸ್ಟಿಕ್ ಕವರ್ ಕಂಡ ನಾಯಿ ಅದರಲ್ಲಿ ಯಾವುದೋ ಆಹಾರ ಇರಬಹುದೆಂದು ಭಾವಿಸಿ, ಬಾಯಿಯಿಂದ ಕಚ್ಚಿದೆ. ಕೂಡಲೇ ಸ್ಫೋಟಗೊಂಡಿದ್ದು, ಪರಿಣಾಮ ನಾಯಿಯ ಮುಖ ಛಿದ್ರವಾಗಿ ಸಾವನ್ನಪ್ಪಿದೆ.
ಸ್ಫೋಟದ ಸದ್ದು ಸುಮಾರು 1 ಕಿಲೋಮೀಟರ್ವರೆಗೆ ಕೇಳಿಸಿದ್ದು, ಇದರಿಂದ ಗ್ರಾಮಸ್ಥರು ಅತಂಕಗೊಂಡಿದ್ದಾರೆ. ಕಾಡು ಹಂದಿಗಳ ನಿಯಂತ್ರಣಕ್ಕೆ ಇಡುವ ಸಿಡಿಮದ್ದಿನ ರೀತಿ ಇದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿ, ಬ್ಲಾಸ್ಟ್ ಆಗಿರುವ ವಸ್ತುವನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ವರದಿ ಬಳಿಕ ಬ್ಲಾಸ್ಟ್ ಆಗಿರುವ ವಸ್ತು ಏನು ಎಂಬುದು ತಿಳಿದುಬರಲಿದೆ. ಸದ್ಯ ಗ್ರಾಮಸ್ಥರು ಸ್ಫೋಟಕ ವಸ್ತುವನ್ನು ಇಟ್ಟಿರುವ ಕಿಡಿಗೇಡಿಗಳ ಪತ್ತೆಗೆ ಆಗ್ರಹಿಸಿದ್ದಾರೆ. ಸಂತೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ಮಂಜುನಾಥನ ಮನೆಯಲ್ಲೂ ಸುಳ್ಳು ಪ್ರಮಾಣ ಮಾಡಿದರೆ ಹೇಗೆ: ಸುರೇಶ್ ಕುಮಾರ್ ಪ್ರಶ್ನೆ
