ಪಾಟ್ನಾ: ಹಸು ಕಳ್ಳತನದ ಶಂಕೆ ವ್ಯಕ್ತವಾಗಿದ್ದರಿಂದ ವ್ಯಕ್ತಿಯೊಬ್ಬನನ್ನು ಹಿಗ್ಗಾಮುಗ್ಗಾ ಥಳಿಸಿ ಕೊಲೆಗೈದ ಅಮಾನವೀಯ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ.
ಮಹೇಶ್ ಯಾದವ್ (44) ಕೊಲೆಯಾದ ವ್ಯಕ್ತಿ. ಅರಾರಿಯಾ ಜಿಲ್ಲೆಯ ಹರಿಪುರ್ ಗ್ರಾಮದಲ್ಲಿ ಗುರುವಾರ ಘಟನೆ ನಡೆದಿದೆ.
ಮಹೇಶ್ ಯಾದವ್ ಸೇರಿದಂತೆ ಮೂವರು ಹಸುಗಳನ್ನು ಕಳವು ಮಾಡಲು ಹರಿಪುರ್ ಗ್ರಾಮಕ್ಕೆ ಹೋಗಿದ್ದರು. ಈ ವೇಳೆ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ. ಮಹೇಶ್ ಹಿಡಿದ ಜನರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಪರಿಣಾಮ ಆತ ಮೃತಪಟ್ಟಿದ್ದಾನೆ ಎಂದು ರಾಬರ್ಟ್ ಗಂಜ್ ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ಮಹೇಶ್ ಈ ಹಿಂದೆ ಹಸು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಮಹೇಶ್ ಕೊಲೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ರಾಬರ್ಟ್ ಗಂಜ್ ಪೊಲೀಸರು, ತನಿಖೆ ಆರಂಭಿಸಿದ್ದಾರೆ.