ಚಿಕ್ಕಮಗಳೂರು: ಕಾಫಿನಾಡ ಮಲೆನಾಡು ಭಾಗದಲ್ಲಿ ಮಂಗಳವಾರ ಸಂಜೆ ಸುಮಾರು ಒಂದು ಗಂಟೆಗಳ ಕಾಲ ಸುರಿದ ಭಾರೀ ಮಳೆ ಮಲ್ಲಿಗೆ ಹೂವಿನಂತೆ ನೆಲಕ್ಕೆ ಬಿದ್ದಿದೆ.
ಮಂಗಳವಾರ ಸಂಜೆ 4.30ರ ಸುಮಾರಿಗೆ ಆರಂಭವಾದ ಮಳೆ 6 ಗಂಟೆವರೆಗೂ ಧಾರಾಕಾರವಾಗಿ ಸುರಿದಿದೆ. ಈ ವೇಳೆ ಮಳೆಗಿಂತ ಆಲಿಕಲ್ಲೇ ಹೆಚ್ಚಾಗಿ ಸುರಿದಿದೆ. ಈ ಕ್ಷಣವನ್ನು ಕಣ್ಣಾರೆ ಕಂಡ ಮಲೆನಾಡಿಗರು ಆಲಿಕಲ್ಲನ್ನು ಲೋಟ, ಬಕೆಟ್, ಪಾತ್ರೆಗಳಲ್ಲಿ ತುಂಬಿ ಸಂತಸಪಟ್ಟಿದ್ದಾರೆ.
ಇದೇ ವೇಳೆ ಬಿದ್ದ 20 ಕೆ.ಜಿ. ತೂಕದ ಆಲಿಕಲ್ಲನ್ನು ಹಿಡಿದು ಫೋಟೋ ತೆಗೆಸಿಕೊಂಡು ಮಲೆನಾಡಿಗರು ಖುಷಿ ಪಟ್ಟಿದ್ದಾರೆ. ಸುಮಾರು ಒಂದು ಗಂಟೆ ಸುರಿದ ಭಾರೀ ಮಳೆಗೆ ಮನೆಯ ಆವರಣದ ತುಂಬೆಲ್ಲಾ ಮಲ್ಲಿಗೆ ಹೂ ಬಿದ್ದಂತೆ ಆಲಿಕಲ್ಲು ಬಿದ್ದಿದೆ.
ಕಳೆದ ಎರಡು ತಿಂಗಳ ಭೀಕರ ರಣಬೀಸಿಲಿಗೆ ಹೈರಾಣಾಗಿದ್ದ ಮಲೆನಾಡಿಗರಿಗೆ ಈ ಮಳೆ ಸಂತಸ ತಂದರೆ, ಈ ಪ್ರಮಾಣದ ಆಲಿಕಲ್ಲು ಮತ್ತುಷ್ಟು ಖುಷಿ ನೀಡಿದೆ. ಆದರೆ ಕಾಫಿ-ಅಡಿಕೆ-ಮೆಣಸು ಬೆಳೆಗಾರರಿಗೆ ಮಳೆ ಖುಷಿ ತಂದರೂ ಆಲಿಕಲ್ಲು ಮಳೆ ತಲೆಮೇಲೆ ಕೈ ಹೊದ್ದು ಕೂರುವಂತೆ ಮಾಡಿದೆ.
ಈ ಪ್ರಮಾಣದಲ್ಲಿ ಮಳೆಗಿಂತ ಆಲಿಕಲ್ಲೇ ಹೆಚ್ಚಾಗಿ ಸುರಿದಿರೋದ್ರಿಂದ ಬೆಳೆ ಹಾಳಾಗುತ್ತೆಂದು ಮಲೆನಾಡಿಗರು ಚಿಂತಕ್ರಾಂತಗೊಂಡಿದ್ದಾರೆ.