ಮೈಸೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಹಾಗೂ ಜಿ.ಟಿ. ಹರೀಶ್ ಗೌಡ ಅವರು ಮೈತ್ರಿ ಅಭ್ಯರ್ಥಿ ಪರವಾಗಿ ಚಾಮುಂಡೇಶ್ವರಿ ಕ್ಷೇತ್ರದ ಆರ್.ಆರ್.ನಗರದಲ್ಲಿ ಪ್ರಚಾರಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿನ ಮಹಿಳೆಯರು ಮೊದಲು ನೀರು ಕೊಡಿ, ನಂತರ ವೋಟು ಕೇಳಿ ಎಂದು ಮೈತ್ರಿ ನಾಯಕರಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇಂದು ಆರ್.ಆರ್.ನಗರದಲ್ಲಿ ಮೈಸೂರು-ಕೊಡಗು ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ಅವರ ಪರವಾಗಿ ಯತೀಂದ್ರ ಸಿದ್ದರಾಮಯ್ಯ ಹಾಗೂ ಜಿ.ಟಿ. ಹರೀಶ್ ಗೌಡ ಪ್ರಚಾರಕ್ಕೆ ಇಳಿದಿದ್ದಾರೆ. ಈ ವೇಳೆ ಅಲ್ಲಿನ ಮಹಿಳೆಯರು ಪ್ರಚಾರಕ್ಕೆ ಅಡ್ಡಿಪಡಿಸಿ ಮೊದಲು ನೀರು ಕೊಡಿ, ನಂತರ ವೋಟು ಕೇಳಿ ಎಂದು ತಾಕೀತು ಮಾಡಿದ್ದಾರೆ. ಅಲ್ಲದೆ ಈ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇದೆ. ಆದ್ರೆ ಜನಪ್ರತಿನಿಧಿಗಳು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ನೀವು ನಮ್ಮ ಸಮಸ್ಯೆ ಬಗೆಹರಿಸಿ, ಆ ಮೇಲೆ ವೋಟು ಕೇಳೋದಕ್ಕೆ ಬನ್ನಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಹರೀಶ್ ಗೌಡ, ನನಗೆ ಸಮಸ್ಯೆ ತಿಳಿದಿದೆ. ಸೆಪ್ಟೆಂಬರ್ವರೆಗೆ ಕಾಲಾವಕಾಶ ಕೊಡಲು ಹೇಳಿದ್ದಾರೆ. ಅಲ್ಲದೆ ಇನ್ನೂ ಎರಡು ವರ್ಷದಲ್ಲಿ ಉಂಡವಾಡಿ ಯೋಜನೆ ಆದ್ರೆ ದಿನದ 24 ಗಂಟೆ ನೀರು ಸಿಗುತ್ತದೆ. ಸೆಪ್ಟೆಂಬರ್ವರೆಗೆ ಸಮಯ ಕೊಟ್ಟರೆ ಅರ್ಧ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಇದೀಗ ಚುನಾವಣಾ ನೀತಿ ಸಂಹಿತೆ ಇದೆ. ಅಧಿಕಾರಿಗಳನ್ನು ಕರೆದುಕೊಂಡು ಬರಲು ಸಾಧ್ಯವಿಲ್ಲ ಎಂದು ಸಮಾಜಾಯಿಸಿ ನೀಡಿ, ನಿಮಗಿರುವ ರಸ್ತೆ, ನೀರಿನ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಮಹಿಳೆಯರಿಗೆ ಆಶ್ವಾಸನೆ ನೀಡಿ ಪ್ರಚಾರವನ್ನು ಮುಂದುವರಿಸಿದರು.