ಮಂಡ್ಯ: ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಅಂಬರೀಶ್ ವಿರುದ್ಧ ಜಿಲ್ಲಾಧಿಕಾರಿ ಮಂಜುಶ್ರೀ ಗರಂ ಆಗಿದ್ದಾರೆ. ತನ್ನ ಮೇಲೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕೊಟ್ಟಿರುವ ಡೆಡ್ ಲೈನ್ ಇಂದಿಗೆ ಕೊನೆಯಾಗುತ್ತದೆ.
ಸಾಕ್ಷ್ಯ ಕೊಡಿ, ಇಲ್ಲಾಂದ್ರೆ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಜಿಲ್ಲಾಧಿಕಾರಿ ನೋಟಿಸ್ ನೀಡಿದ್ದಾರೆ. ಅಲ್ಲದೆ 24 ಗಂಟೆಯಲ್ಲಿ ಆರೋಪ ಸಾಬೀತುಪಡಿಸುವಂತೆಯೂ ಸೂಚನೆ ನೀಡಿದ್ದರು.
ಆರೋಪವೇನು?
ಇಷ್ಟು ದಿನ ವಾದ-ವಿವಾದಗಳು ರಾಜಕಾರಣಿಗಳ ನಡುವೆ ಇತ್ತು. ಆದ್ರೆ ಇದೀಗ ಮಂಡ್ಯ ಜಿಲ್ಲಾಧಿಕಾರಿ ಹಾಗೂ ಸುಮಲತಾ ಮಧ್ಯೆ ಕಾನೂನಾತ್ಮಕ ಹೋರಾಟ ನಡೆಯುತ್ತಿದೆ ಅಂತಾನೆ ಹೇಳಬಹುದು. ಯಾಕಂದ್ರೆ ಜಿಲ್ಲಾಧಿಕಾರಿಯವರು ಮುಖ್ಯಮಂತ್ರಿಗಳ ಮನೆಗೆ ಹೋಗಿ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ಅವರ ಅನುಕೂಲಕ್ಕೆ ತಕ್ಕಂತೆ ಅವರು ಕೆಲಸ ಮಾಡುತ್ತಿದ್ದಾರೆ ಎನ್ನುವ ರೀತಿಯಲ್ಲಿ ಸುಮಲತಾ ಆರೋಪ ಮಾಡಿದ್ದರು. ಇದರಿಂದ ಸಿಟ್ಟುಗೊಂಡಿರುವ ಜಿಲ್ಲಾಧಿಕಾರಿಯವರು, ನಾನು ಇಷ್ಟು ವರ್ಷ ಯಾವುದೇ ರೀತಿಯ ಲೋಪ ಇಲ್ಲದೆ ಕೆಲಸ ಮಾಡಿಕೊಂಡು ಬಂದಿದ್ದೇನೆ. ಇದೀಗ ನಿಮ್ಮ ಆರೋಪದಿಂದ ನನ್ನ ಕರ್ತವ್ಯಕ್ಕೆ ಅವಮಾನ ಮಾಡಿದಂತಿದೆ. ಹೀಗಾಗಿ ನೀವು ಒಂದು ದಿನದೊಳಗಡೆ ಉತ್ತರ ನೀಡಬೇಕು. ಇಲ್ಲವೆಂದಲ್ಲಿ ಮುಂದಿನ ಕ್ರಮ ಜರಗಿಸುತ್ತೇವೆ ಎಂದು ಡಿಸಿ ನೋಟಿಸ್ ನೀಡಿದ್ದರು.
ಅಲ್ಲದೆ ನಿಖಿಲ್ ನಾಮಪತ್ರ ಪ್ರಕ್ರಿಯೆಯಲ್ಲಿಯೂ ದೋಷ ಇದೆ. ಅದನ್ನು ಮುಚ್ಚಾಕುವ ಪ್ರಯತ್ನವನ್ನು ಕೂಡ ಜಿಲ್ಲಾಧಿಕಾರಿಗಳು ಮಾಡುತ್ತಿದ್ದಾರೆ ಎಂಬುದಾಗಿಯೂ ಸುಮಲತಾ ಆರೋಪ ಮಾಡಿದ್ದರು.
ಒಟ್ಟಿನಲ್ಲಿ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಸುಮಲತಾ ಅವರು ಸುದ್ದಿಗೋಷ್ಠಿ ನಡೆಸಲಿದ್ದು, ಡಿಸಿ ನೋಟಿಸ್ ಗೆ ಪ್ರತಿಕ್ರಿಯೆ ನೀಡುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.