ಮಂಡ್ಯ: ಮೈತ್ರಿ ಧರ್ಮದ ಅನ್ವಯ ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಡಲಾಗಿದ್ದ ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅವರಿಗೆ ಬೆಂಬಲ ನೀಡಿದ ಪಕ್ಷ ಮುಖಂಡರಿಗೆ ಕಾಂಗ್ರೆಸ್ ಅಮಾನತು ಶಿಕ್ಷೆ ನೀಡಿದೆ. ಆದರೆ ಪಕ್ಷದ ಈ ನಿರ್ಧಾರವನ್ನು ನಾನು ಸ್ವಾಗತ ಮಾಡುತ್ತೇನೆ ಎಂದು ಅಮಾನತುಗೊಂಡ ಮುಖಂಡ ಶಶಿಕುಮಾರ್ ಹೇಳಿದ್ದಾರೆ.
ಸುಮಲತಾ ಜೊತೆಗೆ ಗುರುತಿಸಿಕೊಂಡಿದ್ದಕ್ಕೆ ಕಾಂಗ್ರೆಸ್ಸಿಗರ ಅಮಾನತು ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಪಕ್ಷದ ನಾಯಕರು ಅಮಾನತು ಮಾಡುವುದನ್ನು ನಾವು ನಿರೀಕ್ಷೆ ಮಾಡಿದ್ದೆವು. ಈ ವಿಚಾರವನ್ನು ನಾನು ಸ್ವಾಗತ ಮಾಡುತ್ತೇನೆ. ಅಮಾನತು ಆದೇಶ ನನಗೆ ಕೊಡುವ ಮೊದಲು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದ ರಮೇಶ್ ಜಾರಕಿಹೊಳಿ ಹಾಗೂ ಇತರೆ ಶಾಸಕರಿಗೆ ಕೊಡಬೇಕಿತ್ತು. ಅವರಿಗೆ ಏಕೆ ಕೊಡಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಪರ ಚುನಾವಣೆ ಮಾಡಲ್ಲ ಎಂದು ಅಮಾನತು ಮಾಡಿದ್ದಾರೆ. ನಾಳೆ ಸ್ಥಳೀಯ ಸಂಸ್ಥೆ ಚುನಾವಣೆ ಬಂದಾಗ ಜೆಡಿಎಸ್ ನಮ್ಮ ಎದುರಾಳಿ. ಆಗ ಜೆಡಿಎಸ್ ಪರ ಇದ್ದಾನೆಂದು ನೋಟಿಸ್ ಕೊಡುತ್ತರಾ ಎಂದು ಪ್ರಶ್ನೆ ಮಾಡಿದರು. ನಾಯಕರು ನೀಡಿರುವ ಅಮಾನತು ಆದೇಶವನ್ನು ನಾವು ಕೇರ್ ಮಾಡಲ್ಲ. ಸಿಎಂ ಕುಮಾರಸ್ವಾಮಿ ಅವರು ಕಾಂಗ್ರೆಸ್ಸಿಗರ ಸಹಾಯ ಬೇಡ ಎಂದಿದ್ದಾರೆ. ಅದ್ದರಿಂದ ಜೆಡಿಎಸ್ ನಾಯಕರಿಂದಲೇ ಚುನಾವಣೆ ಗೆಲ್ಲಲಿ ಎಂದು ಸವಾಲು ಎಸೆದರು.
ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ಕೇವಲ ಶೇ.25 ರಷ್ಟು ಮತಗಳು ಕಡಿಮೆ ಆಗಿತ್ತು, ಆದರೆ ಈ ಬಾರಿ ಉಳಿದ ಶೇ.75 ರಷ್ಟು ಮತಗಳನ್ನು ಪಕ್ಷ ಕಳೆದುಕೊಳ್ಳಲಿದೆ. ಪಕ್ಷ ಕುಗ್ಗಿ ಹೋಗುತ್ತಿದ್ದರು ಕೂಡ ನಾಯಕರು ಮಾತ್ರ ಏಕೆ ಈ ರೀತಿ ಮೈತ್ರಿಗೆ ಒಂದಾಗಿದ್ದಾರೆ ಎಂಬುವುದು ನಮಗೆ ತಿಳಿಯುತ್ತಿಲ್ಲ ಎಂದರು. ಅಲ್ಲದೆ ಮುಂದಿನ ದಿನಗಳಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಇಲ್ಲವಾಗುತ್ತದೆ. ಅಂತಹ ಸಂದರ್ಭದಲ್ಲಿ ಇದರ ಪ್ರತಿಫಲವನ್ನು ಕಾಂಗ್ರೆಸ್ ಹೈಕಮಾಂಡ್ ಸ್ವೀಕರಿಸಬೇಕಾಗುತ್ತದೆ ಎಂದರು.